– ಕೊಲೆಗೈದು ಪೋಲಿಸರಿಗೆ ಶರಣಾದ ಪಾಪಿ
ರಾಮನಗರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯನ್ನ ಹಬ್ಬಕ್ಕೆಂದು ಕರೆತಂದ ಪತಿಯೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಾಗಡಿ ತಾಲೂಕಿನ ಅರಳೆಕಟ್ಟೆ ದೊಡ್ಡಿಯಲ್ಲಿ ನಡೆದಿದೆ.
ಮಾಗಡಿ ತಾಲೂಕಿನ ಅರಳೇಕಟ್ಟೆ ದೊಡ್ಡಿಯ ನಿವಾಸಿ ಹನಮೇಗೌಡ (39) ಕೊಲೆಗೈದ ಆರೋಪಿ. ಪಾರ್ವತಿ (35) ಕೊಲೆಯಾದ ಪತ್ನಿ. ಮಾಗಡಿ ತಾಲೂಕಿನ ಗಟ್ಟೀಪುರ ಸಮೀಪದ ಅರಳೆಕಟ್ಟೆ ದೊಡ್ಡಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿ ಶರಣಾಗಿದ್ದಾನೆ.
ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಹನಮೇಗೌಡ ಹಾಗೂ ಪತ್ನಿ ಪಾರ್ವತಿ ನಡುವೆ ಆಗಾಗ ಸಣ್ಣಪುಟ್ಟ ವಿಷಯಕ್ಕೆಲ್ಲ ಜಗಳ ನಡೆಯುತಿತ್ತು. ಹೀಗಾಗಿ ಪಾರ್ವತಿ ಪದೇ ಪದೇ ಸೋಲೂರಿನ ಗ್ರಾಮದ ತವರು ಮನೆಗೆ ಹೋಗುತ್ತಿದ್ದಳು. ಕಲಹದ ಹಿನ್ನೆಲೆಯಲ್ಲಿ ಹನಮೇಗೌಡ ತನ್ನ ಹುಟ್ಟೂರಾದ ಅರಳೆಕಟ್ಟೆದೊಡ್ಡಿಗೆ ಪತ್ನಿ ಪಾರ್ವತಿಯನ್ನು ಶುಕ್ರವಾರ ಕರೆದುಕೊಂಡು ಬಂದಿದ್ದ. ಸಂಜೆ ಸಮಯದಲ್ಲಿ ಹೊಲಕ್ಕೆ ಕರೆದೊಯ್ದು ಮಾರಕಾಸ್ತ್ರದಿಂದ ತಲೆಗೆ ಹೊಡೆದಿದ್ದಾನೆ.
ಗಂಭೀರವಾಗಿ ಗಾಯಗೊಂಡ ಪಾರ್ವತಿ ಕೆಳಗೆ ಬಿದ್ದ ಒದ್ದಾಡಲು ಆರಂಭಿಸಿದ್ದರು. ಅಷ್ಟಕ್ಕೆ ಕೃತ್ಯ ನಿಲ್ಲಿಸದ ಪಾತಿ ಪತಿ ಕಲ್ಲು ಎತ್ತಿಕೊಂಡು ಪತ್ನಿಯ ತಲೆಯ ಮೇಲೆ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಪತ್ನಿಯನ್ನು ಕೊಲೆ ಮಾಡಿದ್ದೇನೆ ಎಂದು ಘಟನಾ ಸ್ಥಳದ ಮಾಹಿತಿ ನೀಡಿ, ಶರಣಾಗಿದ್ದಾನೆ. ಈ ಸಂಬಂಧ ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.