– ರಾಮನಗರ, ಮಂಡ್ಯ ಜಿಲ್ಲೆಯ ಪ್ರತೀ ಮನೆಗೆ ಆಹ್ವಾನ
– ಜನರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ
ರಾಮನಗರ: ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಪುತ್ರ ಹಾಗೂ ಸ್ಯಾಂಡಲ್ ವುಡ್ ನಟ ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ ಇದೇ ಫೆಬ್ರವರಿ 10 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಆದರೆ ಮದುವೆ ಮಾತ್ರ ರಾಮನಗರದ ಚನ್ನಪಟ್ಟಣದಲ್ಲಿ ಮಾಡಲಾಗುವುದು ಎಂದು ನಿಖಿಲ್ ತಂದೆ ಎಚ್ಡಿ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಮದುವೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ ಎಲ್ಲ ನಾಯಕರು ಮದುವೆಯನ್ನು ಬೆಂಗಳೂರಿನಲ್ಲಿ ಮಾಡುತ್ತಾರೆ. ನಿಖಿಲ್ನ ನಿಶ್ಚಿತಾರ್ಥವನ್ನು ಬೆಂಗಳೂರಿನಲ್ಲಿ ಹಾಗೂ ಮದುವೆ ರಾಮನಗರದಲ್ಲಿ ನಡೆಸುವುದಾಗಿ ತಿಳಿಸಿದರು. ಜೊತೆಗೆ ಮದುವೆಗೆ ರಾಮನಗರ, ಮಂಡ್ಯ ಜಿಲ್ಲೆಯ ಪ್ರತೀ ಮನೆಯವರಿಗೂ ಆಹ್ವಾನ ನೀಡಲಾಗುವುದು ಎಂದರು.
ನನಗೆ ರಾಜಕೀಯವಾಗಿ ಜನ್ಮ ನೀಡಿದ ಎರಡು ಕ್ಷೇತ್ರಗಳ ರಾಮನಗರ, ಚನ್ನಪಟ್ಟಣ ಅಲ್ಲದೇ ಮಂಡ್ಯ, ಮಳವಳ್ಳಿ, ಕನಕಪುರ, ಮಾಗಡಿ ಜನರ ಋಣ ನನ್ನ ಮೇಲಿದೆ. ಆ ಜನರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲೆ ಇದೆ. ಸಮಾರಂಭ ಎಂದು ಮಾಡುವ ಅವಕಾಶವಿರುವುದು ಇದೊಂದೇ ಆಗಿದ್ದು, ಪ್ರತೀ ಮನೆಗೂ ಆಹ್ವಾನ ಪತ್ರಿಕೆ ನೀಡುವ ವ್ಯವಸ್ಥೆ ಮಾಡುತ್ತಿದ್ದಾನೆ. ಎರಡೂ ಜಿಲ್ಲೆಯ ಎಲ್ಲರಿಗೂ ಮದುವೆಗೆ ಆಹ್ವಾನವನ್ನು ನೀಡಲಾಗುವುದು ಎಂದು ಹೇಳಿದರು. ಇದನ್ನು ಓದಿ: ನಂಗೆ ರೇವತಿ ಅವರೇ ಪರ್ಫೆಕ್ಟ್ ಪಾರ್ಟ್ನರ್: ನಿಖಿಲ್
ರಾಮನಗರ, ಮಂಡ್ಯ ಜಿಲ್ಲೆಗಳ ಜನರಿಗೆ ಊಟ ಹಾಕಬೇಕೆಂಬ ಆಸೆ ಇತ್ತು. ಮಗನ ಮದುವೆ ಮೂಲಕ ಜನರಿಗೆ ಊಟ ಹಾಕಲಾಗುವುದು. ಜನರ ಜೊತೆಗೆ ಮಗನ ಮದುವೆಯ ಸಂಭ್ರಮ ಸಹ ಮಾಡುವುದಾಗಿ ತಿಳಿಸಿದರು.