ರಾಮನಗರ: ಮಾಜಿ ಸಚಿವ ಹಾಗೂ ಕನಪುರ ಶಾಸಕ ಡಿ.ಕೆ ಶಿವಕುಮಾರ್ ಸ್ವಕ್ಷೇತ್ರ ಕನಕಪುರದ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ನಿರ್ಮಿಸಲು ಮುಂದಾಗಿರೋ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರತಿಮೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಬಿಜೆಪಿ ನಾಯಕರು ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದರೆ. ಇತ್ತ ಕಂದಾಯ ಸಚಿವರ ಸೂಚನೆ ಮೇರೆಗೆ ರಾಮನಗರ ಜಿಲ್ಲೆಯ ಅಧಿಕಾರಿಗಳ ತಂಡ ಪ್ರತಿಮೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲ ಬೆಟ್ಟದಲ್ಲಿ ನಿರ್ಮಿಸಲು ಉದ್ದೇಶಿರುವ ಏಸುವಿನ 114 ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ಈ ವಿಚಾರವಾಗಿ ಸಂಪೂರ್ಣ ವರದಿ ನೀಡಲು ಕಂದಾಯ ಸಚಿವ ಆರ್ ಆಶೋಕ್ ಅವರು ರಾಮನಗರ ಜಿಲ್ಲಾಧಿಕಾರಿ ಎಮ್ ಎಸ್ ಅರ್ಚನಾ ಅವರಿಗೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕಪಾಲ ಬೆಟ್ಟದ ಏಸು ಪ್ರತಿಮೆ ನಿರ್ಮಾಣ ಸ್ಥಳಕ್ಕೆ ರಾಮನಗರ ಉಪವಿಭಾಗಧಿಕಾರಿ ದಾಕ್ಷಾಯಿಣಿ, ಕನಕಪುರ ತಹಶೀಲ್ದಾರ್ ಅನಂದಯ್ಯ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಧಿಕಾರಿಗಳ ಭೇಟಿ ಬಗ್ಗೆ ಕನಕಪುರ ತಾಲೂಕಿನ ರಸ್ತೆ ಜಕ್ಕಸಂದ್ರದ ಜೈನ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಕ್ರಿಸಿದ ಡಿಕೆಶಿ, ಅಧಿಕಾರಿಗಳು ಭೇಟಿ ನೀಡೋದ್ರಲ್ಲಿ ತಪ್ಪೇನಿಲ್ಲ, ಕಂದಾಯ ಸಚಿವರಾದ ಅಶೋಕ್ ಬೇಕಾದರೆ ಭೇಟಿ ನೀಡಲಿ. ರಾಜ್ಯದ ಸಿಎಂ ಮತ್ತು ಮಂತ್ರಿಗಳಿಗೆ ಗವರ್ನರ್ ಪ್ರತಿಜ್ಞಾ ವಿಧಿ ಹೇಳಿದ್ದಾರೆ. ಏನ್ ಪ್ರತಿಜ್ಞೆ ಭೋದಿಸಿದ್ದಾರೆ ಎಂದು ರಿಪೀಟ್ ಮಾಡಿಕೊಳ್ಳಲಿ. ಆ ಜಾಗಕ್ಕೆ 1600 ಇಸವಿಯಿಂದಲೂ ಇತಿಹಾಸ ಇದೆ. ನಾನೇನು ಹೊಸದಾಗಿ ಮಾಡಲು ಆಗುವುದಿಲ್ಲ ಎಂದರು.
ಡಿಕೆಶಿ ತಮ್ಮ ಹಳ್ಳವನ್ನು ತಾವೇ ತೋಡಿಕೊಳ್ಳುತ್ತಿದ್ದಾರೆ ಎಂಬ ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ್ರವರು ಹೇಳಿಕೆಗೆ ಹಳ್ಳ ತೋಡಿಕೊಂಡಿದ್ದೀನಿ ಅವರು ಬಂದು ಸಮಾಧಿ ಮಾಡಲಿ. ನಾನು ಸಾಕಷ್ಟು ದೇವಸ್ಥಾನಗಳ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಅವರು ನೋಡಲಿ ತೋರಿಸಿ ಎಂದರು. ಅಲ್ಲದೇ ನಮಸ್ತೇ ಸದಾ ವತ್ಸಲೇ ಮಾತೃಭೂಮಿ ಎಂಬ ವಾಕ್ಯ ನನಗೂ ಕೂಡಾ ಗೊತ್ತಿದೆ. ಯಾವ ದೇವರು, ಯಾವ ಧರ್ಮ, ಯಾರನ್ನು ಆಚರಣೆ ಮಾಡಬೇಕು ಎಂಬುದು ಅವರವರ ವೈಯಕ್ತಿಕ ವಿಚಾರ ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.