– ಸೆಲ್ಫಿ ಕೇಳಿದವ್ರಿಗೆ ಸಮಾಧಾನದಿಂದ ಪೋಸ್ ಕೊಟ್ಟ ಫೈರಿಂಗ್ ಸ್ಟಾರ್
ರಾಮನಗರ: ನಾನೇ ದೇವರು ನಾನ್ಯಾಕೆ ದೇವಸ್ಥಾನಕ್ಕೆ ಹೋಗಲಿ. ನಮ್ಮಪ್ಪ ರಾಮನಗರದ ವಿಜಯನಗರದಲ್ಲಿ ಓವರ್ ಹೆಡ್ ವಾಟರ್ ಟ್ಯಾಂಕ್ ಕಟ್ಟಿಸಿದ್ದಾರೆ ಎಂದು ನಟ ಹುಚ್ಚ ವೆಂಕಟ್ ರಾಮನಗರದಲ್ಲೂ ರಂಪಾಟ ಮುಂದುವರಿಸಿದ್ದಾನೆ.
ಕೊಡಗು, ಮಂಡ್ಯದಲ್ಲಿ ಹುಚ್ಚ ವೆಂಕಟ್ ಹುಚ್ಚಾಟ ನಡೆಸಿ, ಕಾರಿನ ಮೇಲೆ ಕಲ್ಲು ಎಸೆದು ಗೂಸಾ ತಿಂದು ಇಂದು ರಾಮನಗರಕ್ಕೆ ಕಾಲಿಟ್ಟಿದ್ದರು. ನಗರದ ರಾಮದೇವರ ಬೆಟ್ಟದ ರಸ್ತೆಯ ಕೊಂಕಾಣಿದೊಡ್ಡಿಯಲ್ಲಿ ಕೆಲ ಸಮಯ ಕಾರು ನಿಲ್ಲಿಸಿಕೊಂಡು ನಿಂತಿದ್ದರು. ಬಳಿಕ ವಿಜಯನಗರದ ಟೀ ಸ್ಟಾಲ್ವೊಂದರ ಬಳಿ ಕಾರ್ ನಿಲ್ಲಿಸಿ, ಟೀ ಕುಡಿದು ಅಲ್ಲೇ ಮಾತು ಆರಂಭಿಸಿದರು.
ಹುಚ್ಚ ವೆಂಕಟ್ ಟೀ ಕುಡಿಯುತ್ತಾ ಯುವಕನೋರ್ವನಿಗೆ ಯಾವ್ ಭಾಷೆ ಮಾತನಾಡ್ತಿದ್ಯಾ ಎಂದು ಅವಾಜ್ ಹಾಕಿದ್ದಾರೆ. ತನ್ನ ಬಳಿ ಬಂದ ಸಾರ್ವಜನಿಕರಿಗೆ ಊಟ ಆಯ್ತಾ ಎಂದು ಸಹಜವಾಗಿಯೇ ಮಾತನಾಡಿಸಿದರು. ಈ ನಡುವೆ ಕೆಲವರು ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಫೋಸ್ ಕೊಟ್ಟಿದ್ದಾರೆ.
ರಾಮದೇವರ ಬೆಟ್ಟದ ಕಡೆಯಿಂದ ಹುಚ್ಚ ವೆಂಕಟ್ ಬಂದಿದ್ದನ್ನು ನೋಡಿದ್ದ ಗ್ರಾಮಸ್ಥರು, ದೇವಸ್ಥಾನಕ್ಕೆ ಹೋಗಿದ್ರಾ ಎಂದು ಪ್ರಶ್ನಿಸಿದರು. ಏಕಾಏಕಿ ಧ್ವನಿ ಏರಿಸಿದ ಪೈರಿಂಗ್ ಸ್ಟಾರ್, ನಾನೇ ದೇವರು. ನಾನ್ಯಾಕೆ ದೇವಸ್ಥಾನಕ್ಕೆ ಹೋಗಲಿ, ಮುಂದೆ ಕಾಣುತ್ತಿರುವ ವಿಜಯನಗರದ ಓವರ್ ಹೆಡ್ ವಾಟರ್ ಟ್ಯಾಂಕ್ನ ನಮ್ಮಪ್ಪ ಕಟ್ಟಿಸಿದ್ದು ಎಂದು ರಂಪಾಟ ಮಾಡಿದರು. ನಂತರ ಅಲ್ಲಿಂದ ಬೆಂಗಳೂರು ಕಡೆಗೆ ಕಾರಿನಲ್ಲಿ ಪ್ರಯಾಣಿಸಿದರು.