ಬೆಂಗಳೂರು: ಆರತಕ್ಷತೆ ವೇಳೆ ಹೀಲ್ಡ್ ಚಪ್ಪಲಿ ಧರಿಸಿದ್ದ ವಧು ಸುಸ್ತಾಗಿ ಬಿದ್ದ ಕಾರಣವನ್ನೇ ನೆಪವಾಗಿಟ್ಟುಕೊಂಡು ವರ ಮದುವೆಯನ್ನೇ ಮುರಿದ ಘಟನೆ ರಾಮನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ರಾಮನಗರದ ಶಾಂತಿಲಾಲ್ ಲೇಔಟ್ನ ಚೈತ್ರ ಹಾಗೂ ತುಮಕೂರಿನ ಕುಣಿಗಲ್ ತಾಲೂಕಿನ ಹೊಸದೊಡ್ಡಿ ಗ್ರಾಮದ ಪ್ರದೀಪ್ ಕುಮಾರ್ ವಿವಾಹ ಇಂದು ನಡೆಯಬೇಕಿತ್ತು. ಆದ್ರೆ ಕಳೆದ ರಾತ್ರಿ ಅರತಕ್ಷತೆ ವೇಳೆ ವಧು ಚೈತ್ರ ಹೀಲ್ಡ್ ಚಪ್ಪಲಿ ಧರಿಸಿ 3 ಗಂಟೆ ಆರತಕ್ಷತೆಗೆಂದು ನಿಂತಿದ್ದರಿಂದ ಸುಸ್ತಾಗಿ ಬಿದ್ದಿದ್ದರು. ಹಿಮ್ಮುಖವಾಗಿ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ವಧುವನ್ನು ನೀರು ಕುಡಿಸಿ ಸುಧಾರಿಸಲಾಗಿತ್ತು. ಆದ್ರೆ ಇದನ್ನೇ ನೆಪವಾಗಿಟ್ಟುಕೊಂಡ ವರ ಪ್ರದೀಪ್ ಆಕೆಗೆ ಮೂರ್ಛೆ ರೋಗವಿದೆ ಎಂದು ತಗಾದೆ ತೆಗೆದಿದ್ದಾನೆ.
ಇದ್ರಿಂದ ಆತಂಕಗೊಂಡ ವಧುವಿನ ಕಡೆಯುವರು ರಾತ್ರಿಯಿಡೀ ರಾಜಿ ಸಂಧಾನ ನಡೆಸಿದ್ರೂ ಕೂಡ ವರ ಮದುವೆಗೆ ಒಪ್ಪಿಲ್ಲ. ಇಂದು ಬೆಳಗ್ಗೆ ಕೂಡ ರಾಜಿ ಸಂಧಾನ ನಡೆಸಿದ್ರೂ ವಿಫಲವಾಗಿದೆ. ಅಲ್ಲದೇ ವರನ ಕಡೆಯವರು ಮದುವೆ ಮುರಿದು ಬಿದ್ದಿದ್ದಕ್ಕೆ ವಧುವಿನ ಕುಟುಂಬಕ್ಕೆ 6 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಿ ಕೈ ತೊಳೆದುಕೊಂಡಿದ್ದಾರೆ.