ರಾಮನಗರ: ರಾಮನಗರ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ತಮ್ಮ ಅಧಿಕಾರಿಗಳ ಜೊತೆ ಎಸ್ಎಸ್ಎಲ್ಸಿ ಮಕ್ಕಳ ಪರೀಕ್ಷೆಗೆ ಶುಭಾಶಯವನ್ನು ಹೇಳುವ ಮೂಲಕ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಒತ್ತಡವನ್ನ ನಿವಾರಿಸಲು ಕೆಲ ಸಮಯವನ್ನು ಕಳೆದಿದ್ದಾರೆ.
ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರು ಕಂದಾಯ ಸಚಿವ ಆರ್.ಅಶೋಕ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ತಿಂಗಳಿಗೆ ಒಂದು ದಿನ ಜನ ಸಂಪರ್ಕ ಸಭೆ ನಡೆಸಲು ಚನ್ನಪಟ್ಟಣ ತಾಲೂಕಿನ ವಿರೂಪಾಕ್ಷಿಪುರ ಹೋಬಳಿಯ ಇಗ್ಗಲೂರು ಗ್ರಾಮದಲ್ಲಿ ಜನಸಂಪರ್ಕ ಸಭೆ ನಡೆಸಿದ್ದಾರೆ. ಈ ವೇಳೆ ಹಮ್ಮಿಕೊಳ್ಳಲಾಗಿದ್ದ ಜನಸಂಪರ್ಕ ಸಭೆ ಮುಗಿದ ನಂತರ ಇಗ್ಗಲೂರು ಪ್ರೌಢಶಾಲೆಗೆ ಭೇಟಿ ನೀಡಿ 10ನೇ ತರಗತಿಯ ಮಕ್ಕಳೊಂದಿಗೆ ಪರೀಕ್ಷಾ ಸಿದ್ಧತೆ ಕುರಿತು ಕೆಲವು ಸಮಯ ಚರ್ಚಿಸಿದರು.
ಜಿಲ್ಲಾಧಿಕಾರಿಗಳು ಕೇಳಿದ ಸಾಮಾನ್ಯ ಪ್ರಶ್ನೆಗೆ ಉತ್ತರಿಸಿದ ವಿದ್ಯಾರ್ಥಿಗಳು, ಈಗಾಗಲೇ ಪಠ್ಯವೆಲ್ಲವೂ ಪೂರ್ಣವಾಗಿದ್ದು, ಮಾದರಿ ಪ್ರಶ್ನಪತ್ರಿಕೆಗಳನ್ನು ಪಡೆದು ಅಭ್ಯಾಸ ನಡೆಸುತ್ತಿರುವುದಾಗಿ ತಿಳಿಸಿದರು. ಮಕ್ಕಳನ್ನು ವಿಷಯದ ಬಗ್ಗೆ ವಿಚಾರಿಸಿ ನಿಮಗೆ ಯಾವ ವಿಷಯ ಕಠಿಣವಾಗುತ್ತಿದೆ, ಯಾವ ವಿಷಯ ಸುಲಭವಾಗಿ ಕಲಿಯಲು ಸಾಧ್ಯ ಎಂದು ಪ್ರಶ್ನಿಸಿದರು. ನಂತರ ಉತ್ತಮ ಫಲಿತಾಂಶದೊಂದಿಗೆ ಎಲ್ಲ ಮಕ್ಕಳು ಉತ್ತೀರ್ಣರಾಗಿ ಎಂದು ಶುಭ ಹಾರೈಸಿದರು.
ನಂತರ ಮಧ್ಯಾಹ್ನದ ಊಟಕ್ಕೆ ವಿದ್ಯಾರ್ಥಿಗಳ ಜೊತೆ ಸರತಿ ಸಾಲಿನಲ್ಲಿ ಕುಳಿತು ‘ಸಮತೋಮ ಸದ್ಗಮಯ ಜ್ಯೋತಿರ್ಗಮಯ’ ಪ್ರಾರ್ಥನೆಯನ್ನ ಮಾಡಿ ಊಟ ಸವಿದರು. ಇವರಿಗೆ ಎಸಿ ದಾಕ್ಷಾಯಿಣಿ, ಜಿಲ್ಲಾ ಪಂಚಾಯತ್ ಸಿಇಓ ಇಕ್ರಂ, ಚನ್ನಪಟ್ಟಣ ತಹಶೀಲ್ದಾರ್ ಸುದರ್ಶನ್ ಸಾಥ್ ನೀಡಿದ್ದರು. ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ಪರಿಸರ ಸ್ನೇಹಿತ ವಾತಾವರಣ ಉಂಟು ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿ.ಪಂ ಸಿಇಓ ಇಕ್ರಂಗೆ ಸೂಚಿಸಿದರು.