ರಾಮನಗರ: ಲೋಕಸಭಾ ಚುನಾವಣಾ ಫಲಿತಾಂಶ ದಿನದಿಂದ ಮಾಧ್ಯಮದಿಂದ ಅಂತರ ಕಾಯ್ದುಕೊಂಡಿದ್ದ ಸಿಎಂ, ಇಂದು ಸ್ವಕ್ಷೇತ್ರಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರ ಜತೆಗೆ ಮಾತನಾಡಿದ್ದಾರೆ.
ಇಂದು ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಟಾಂಗ್ ನೀಡಿದ್ದಾರೆ.
ಜಿಂದಾಲ್ ವಿಚಾರದಲ್ಲಿ ಯಡಿಯೂರಪ್ಪನವರು 20 ಕೋಟಿ ಚೆಕ್ ಪಡೆದಿರುವುದನ್ನು ರಿಲೀಸ್ ಮಾಡಿದ್ದು ನಾನೇ ಆದರೆ ಇವತ್ತು ಅವರೇ ರಸ್ತೆಗಿಳಿದು ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ನಾನು ಅವರಿಗೆ ಈ ವಿಚಾರದ ಬಗ್ಗೆ ಚರ್ಚೆ ಮಾಡೋಣ ಬನ್ನಿ ಎಂದಿದ್ದೆ, ಆದರೆ ಅವರು ಬಂದಿಲ್ಲ ಎಂದು ಇಗ್ಗಲೂರು ಬ್ಯಾರೇಜ್ ಬಳಿ ಸಿಎಂ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.
ಇದೇ ವೇಳೇ ಸ್ವಕ್ಷೇತ್ರ ರಾಮನಗರದ ಬಗ್ಗೆ ಮಾತನಾಡಿ, ರಾಮನಗರ, ಚನ್ನಪಟ್ಟಣ ಕ್ಷೇತ್ರಗಳ ಅಭಿವೃದ್ಧಿಗೆ ನಾನು ಬದ್ಧ. ಆದರೆ ಕೆಲವರು ಸರ್ಕಾರ ಈಗ ಬೀಳುತ್ತೆ, ನಾಳೆ ಬೀಳುತ್ತೆ ಎನ್ನುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಚುನಾವಣೆಗಳು ಮತ್ತು ಬೇರೆ ಕಾರಣಗಳಿಂದಾಗಿ ಚನ್ನಪಟ್ಟಣಕ್ಕೆ ಬರಲಾಗಿಲ್ಲ. ಆದರೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನನಗೆ ಗಮನವಿದೆ ಎಂದು ಹೇಳಿದರು.