ರಾಮನಗರ: ಶಿವರಾತ್ರಿ ಹಬ್ಬ ಬಂದ್ರೆ ಸಾಕು ಶಿವನ ಭಕ್ತರಿಗೆ ಹಬ್ಬವೋ ಹಬ್ಬ. ಜಾಗರಣೆ, ವ್ರತ, ಉಪವಾಸ, ಜಾತ್ರೆ ಅಂತೆಲ್ಲಾ ಬಿಜಿಯಾಗುತ್ತಾರೆ. ಅದೇ ರೀತಿ ಶಿವರಾತ್ರಿಯಲ್ಲಿ ಧರಿಸುವ ಇಷ್ಟಲಿಂಗಗಳು ಸಾಕಷ್ಟು ಮಹತ್ವವನ್ನು ಪಡೆದುಕೊಳ್ಳುತ್ತದೆ. ಅದರಲ್ಲೂ ವೀರಶೈವ ಸಮುದಾಯದವರಂತೂ ಈ ಶಿವರಾತ್ರಿಯನ್ನು ಅದ್ದೂರಿಯಾಗಿ ಆಚರಿಸುವುದರ ಜೊತೆಗೆ ಧರಿಸುವ ಇಷ್ಟಲಿಂಗಗಳಿಗೆ ಸಾಕಷ್ಟು ಮಹತ್ವವನ್ನ ನೀಡುತ್ತಾರೆ.
ಅದರಲ್ಲೂ ಶಿವರಾತ್ರಿಯ ವೇಳೆ ವೀರಶೈವರು ದೇವಲಿಂಗಗಳಿಗೆ ಪೂಜೆ ಸಲ್ಲಿಸುವುದಲ್ಲದೇ ತಾವು ಧರಿಸುವ ಇಷ್ಟಲಿಂಗಗಳಿಗೂ ಸಹ ಶಿವರಾತ್ರಿಯಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಆದರೆ ಆಧುನಿಕ ಜಗತ್ತಿನಲ್ಲಿ ಈ ಇಷ್ಟಲಿಂಗಗಳ ತಯಾರಿಕೆ ಮಾಡುವುದು ಕಣ್ಮರೆಯಾಗುತ್ತಿದೆ. ಆದರೂ ಸಹ ಇಷ್ಟಲಿಂಗಗಳನ್ನು ತಯಾರು ಮಾಡುವ ಕುಟುಂಬವೊಂದು ಸುಮಾರು ದಶಕಗಳಿಂದ ನಿರಂತರವಾಗಿ ಲಿಂಗ ತಯಾರಿಕೆ ಕಾರ್ಯದಲ್ಲಿ ನಿರತವಾಗಿದೆ. ಅಲ್ಲದೇ ಜನರ ಇಚ್ಛೆಗೆ ತಕ್ಕಂತೆ ಲಿಂಗಗಳನ್ನು ತಯಾರು ಮಾಡಿಕೊಡುತ್ತಿದ್ದಾರೆ.
ಅಂದಹಾಗೇ ಈ ಇಷ್ಟಲಿಂಗ ತಯಾರಿಕೆಯನ್ನು ರಾಮನಗರ ಜಿಲ್ಲೆಯ ವಿಭೂತಿಕೆರೆ ಗ್ರಾಮದ ಸಿದ್ದಯ್ಯ ಅವರ ಕುಟುಂಬ ಮಾಡುತ್ತಿದೆ. ಮೂಲತಃ ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದ ಸಿದ್ದಯ್ಯನವರ ಮಕ್ಕಳಾದ ಶಿವಾನಂದ ಮತ್ತು ಮಹಾದೇವ ಸ್ವಾಮಿ ಸೋದರರು ತಮ್ಮ ಪರಂಪರೆಯ ಇಷ್ಟಲಿಂಗಗಳ ತಯಾರಿಕೆಯನ್ನ ಮುಂದುವರಿಸಿದ್ದಾರೆ. ಸಿದ್ದಯ್ಯ ಅವರು ಚನ್ನಪಟ್ಟಣ ತಾಲೂಕಿನ ಬೇವೂರಿನ ಸಿದ್ದರಾಮಣ್ಣ ಎಂಬವರಿಂದ ಇಷ್ಟಲಿಂಗಗಳ ತಯಾರು ಮಾಡುವುದನ್ನು ಕಲಿತುಕೊಂಡರು. ಅದನ್ನು ಇದೀಗ ಅವರ ಮಕ್ಕಳು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಇಷ್ಟಲಿಂಗ, ಶಿವಲಿಂಗಗಳ ತಯಾರಿಕೆ ಅತ್ಯಂತ ಸೂಕ್ಷ್ಮ ಕೆಲಸವಾಗಿದ್ದು, ಜಾಗೃತೆಯಿಂದ ತಯಾರು ಮಾಡಬೇಕು. ಗೇರು ಬೀಜ, ಕರ್ಪೂರ, ತುಪ್ಪ, ರಾಳು, ಶಿಲಾರಸ, ಪಾದರಸ, ಶಾಂತರಸವನ್ನು ಉಪಯೋಗಿಸಿ ಲಿಂಗ ತಯಾರಿಸಲಾಗುತ್ತದೆ. ಇಷ್ಟಲಿಂಗಗಳನ್ನ ತಯಾರಿಸುವ ವೇಳೆ ಸಾಕಷ್ಟು ಶ್ರಮವನ್ನು ಹಾಕಿ ಭಯ ಭಕ್ತಿಯಿಂದ ತಯಾರು ಮಾಡಬೇಕಾಗಿದೆ. ಈ ಲಿಂಗಗಳನ್ನು ಧರಿಸುವುದರಿಂದ ಚರ್ಮವ್ಯಾಧಿ ಕೂಡ ಗುಣವಾಗುತ್ತೆ ಎನ್ನುವ ಪ್ರತೀತಿಯಿದೆ.
ಸಿದ್ದಯ್ಯ ಅವರ ಕುಟುಂಬದವರು ತಯಾರಿಸುವ ಇಷ್ಟಲಿಂಗಕ್ಕೆ ರಾಜ್ಯವಲ್ಲದೇ ಹೊರರಾಜ್ಯದಲ್ಲೂ ಸಹ ಸಾಕಷ್ಟು ಬೇಡಿಕೆಯಿದೆ. ಜೊತೆಗೆ ಯಡಿಯೂರು, ಸಕಲೇಶಪುರದ ಬೈಕೆರೆಯಲ್ಲೂ ಸಹ 6 ಅಡಿ ಎತ್ತರದ ಲಿಂಗಗಳನ್ನು ತಯಾರಿಸಿದ್ದಾರೆ. ಇಷ್ಟಲಿಂಗಗಳನ್ನು ಕೊಳ್ಳಲು ರಾಜ್ಯದ ಅನೇಕ ಜಿಲ್ಲೆಗಳಿಂದ ಜನ ಬಂದು ತಮಗಿಷ್ಟದಂತೆ ಇಷ್ಟಲಿಂಗಗಳನ್ನ ಮಾಡಿಸಿಕೊಂಡು ಹೋಗುತ್ತಾರೆ.