ರಾಮನಗರ: ಬೆಳ್ಳಂ ಬೆಳಗ್ಗೆ ರಾಮನಗರದಲ್ಲಿ ಬಾಂಬ್ ವದಂತಿಯಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾದ ಘಟನೆ ನಡೆದಿದೆ.
ನಗರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ರಾಮಘಡ್ ಹೋಟೆಲ್ ಸಮೀಪ ಎರಡು ಬಾಂಬ್ ಬಿಸಾಡಲಾಗಿದೆ ಎಂಬ ಹಿನ್ನೆಲೆಯಲ್ಲಿ ಶ್ವಾನದಳ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ಎರಡು ಆಟಂ ಬಾಂಬ್ ಪಟಾಕಿಗಳು ಸಿಕ್ಕಿದ್ದು ಜನರು ನಿರಾಳರಾಗುವಂತೆ ಮಾಡಿದೆ.
ರಾತ್ರಿ ಗಣೇಶ ವಿಸರ್ಜನೆ ವೇಳೆ ಪಟಾಕಿ ಸಿಡಿಸುತ್ತಿದ್ದ ಯುವಕರು ಎರಡು ಪಟಾಕಿಗಳನ್ನು ಬಿಟ್ಟು ಹೋಗಿದ್ದಾರೆ. ಬೆಳಗ್ಗೆ ಹೋಟೆಲ್ ಬಳಿ ಸಾರ್ವಜನಿಕರು ಬಂದಾಗ ಪಟಾಕಿಯನ್ನ ಬಾಂಬ್ ಎಂದು ಆತಂಕಗೊಂಡು ಐಜೂರು ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಶ್ವಾನದಳ ಪರಿಶೀಲನೆ ನಡೆಸಿ ಆಟಂ ಬಾಂಬ್ ಪಟಾಕಿಯನ್ನು ತೆಗೆದುಕೊಂಡಿದ್ದಾರೆ.
ಈ ಬಗ್ಗೆ ರಾಮನಗರ ಎಸ್ಪಿ ಅನೂಪ್ ಎ ಶೆಟ್ಟಿ ರವರು ಜಿಲ್ಲೆಯ ಜನ ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ಅದು ಬಾಂಬ್ ಅಲ್ಲ ಪಟಾಕಿ ಎಂದು ತಿಳಿಸಿದ್ದಾರೆ. ಇನ್ನೂ ಬಾಂಬ್ ಎಂದು ಆತಂಕಗೊಂಡಿದ್ದ ಜನರು ಇದೀಗ ನಿರಾಳರಾಗಿದ್ದಾರೆ.