ರಾಮನಗರ: ಆಷಾಢ ಮಾಸದಲ್ಲಿ ನೂತನ ದಂಪತಿಗಳನ್ನು ಬೇರೆ ಮಾಡಿ, ಹೆಣ್ಣನ್ನು ತವರು ಮನೆಗೆ ಕಳಿಸುವುದು ವಾಡಿಕೆ. ಯಾಕೆಂದರೆ ಆಷಾಢ ಮಾಸದಲ್ಲಿ ಅತ್ತೆ-ಸೊಸೆ ಒಂದೇ ಬಾಗಿಲಿನಲ್ಲಿ ಓಡಾಡಿದರೆ ಕೇಡಾಗುತ್ತೆ ಎನ್ನಲಾಗುತ್ತದೆ.
ಆದರೆ ದಂಪತಿಗಳನ್ನು ಆಷಾಢದಲ್ಲಿ ಒಂದೆಡೆ ಸೇರಿಸುವಂತಹ ಜಾತ್ರಾ ಮಹೋತ್ಸವ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದೇವರ ಹೊಸಹಳ್ಳಿಯಲ್ಲಿ ನಡೆಯುತ್ತದೆ. ನೂತನ ದಂಪತಿಗಳನ್ನು ಒಂದೆಡೆ ಸೇರಿಸುವ ಸಂಜೀವರಾಯಸ್ವಾಮಿಯ ಜಾತ್ರಾ ಮಹೋತ್ಸವ ಇಂದು ಅದ್ಧೂರಿಯಾಗಿ ನಡೆಯಿತು.
ದೇವರ ಹೊಸಹಳ್ಳಿಯ ಪುರಾತನವಾದ ಸಂಜೀವರಾಯ ಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಹೊಸ ದಂಪತಿಗಳು ಇಲ್ಲಿಗೆ ಬಂದು ದೇವರಲ್ಲಿ ಇಷ್ಟಾರ್ಥವನ್ನು ನೆನೆದು ಪೂಜೆ ಸಲ್ಲಿಸುತ್ತಾರೆ. ಅಲ್ಲದೇ ನೂತನ ದಂಪತಿಗಳು ಈ ದೇವರ ಸನ್ನಿಧಿಯಲ್ಲಿ ಸಂತಾನ ಬಯಸಿ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ನೆರವೇರುತ್ತೆ ಎಂಬ ಪ್ರತೀತಿ ಸಹ ಇದೆ. ಬೇರೆಯಾಗಿರುವ ದಂಪತಿಗಳಿಗೆ ಈ ಜಾತ್ರೆ ವೇದಿಕೆಯಾಗಿದ್ದು ರಾಮನಗರ ಜಿಲ್ಲೆ ಅಲ್ಲದೇ ಸುತ್ತಮುತ್ತಲ ಜಿಲ್ಲೆಯ ನೂತನ ದಂಪತಿಗಳು ಸಹ ಇಂದು ನಡೆದ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಆಷಾಢದ ವಿರುದ್ಧವಾಗಿ ನಡೆಯುವ ಜಾತ್ರೆಗಳಲ್ಲಿ ಸಂಜೀವರಾಯ ಸ್ವಾಮಿಯ ಜಾತ್ರೆಯೂ ಕೂಡಾ ಒಂದಾಗಿದ್ದು, ಬ್ರಹ್ಮರಥೋತ್ಸವದಲ್ಲಿ ನೂತನ ದಂಪತಿಗಳು ಇಷ್ಟಾರ್ಥವನ್ನು ನೆನೆದು ರಥವನ್ನು ಎಳೆದು ಜಾತ್ರೆಯಲ್ಲೆಲ್ಲ ದಂಪತಿಗಳು ಕೈ ಕೈ ಹಿಡಿದು ಓಡಾಡಿದ್ದು ವಿಶೇಷವಾಗಿತ್ತು.