ರಾಮನಗರ: ಅನಾಮಧೇಯ ಫೋನ್ ಕರೆಯಿಂದ ಆರತಕ್ಷತೆಗೂ ಮುನ್ನವೇ ಮದುವೆಯೊಂದು ಮುರಿದು ಬಿದ್ದಿರುವ ಘಟನೆ ರಾಮನಗರದ ಚನ್ನಪಟ್ಟಣದ ತಿಟ್ಟಮಾರನಹಳ್ಳಿಯಲ್ಲಿ ನಡೆದಿದೆ.
ನಗರದ ಎಲೆಕೇರಿ ಬಡಾವಣೆಯ ಮಧುಶ್ರೀ (ಹೆಸರನ್ನು ಬದಲಾಯಿಸಲಾಗಿದೆ) ಮತ್ತು ಎಲೀಯೂರು ಗ್ರಾಮದ ಬಸವರಾಜುಗೂ ಆರು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿ ಮದುವೆ ನಿಶ್ಚಯ ಮಾಡಲಾಗಿತ್ತು. ಅದರಂತೆ ಇಂದು ಚನ್ನಪಟ್ಟಣದ ತಿಟ್ಟಮಾರನಹಳ್ಳಿಯ ಚೇತನ ಸಮುದಾಯ ಭವನದಲ್ಲಿ ಮದುವೆ ನಡೆಯಬೇಕಿತ್ತು.
ಆದರೆ ಸಾಯಂಕಾಲ ಆರತಕ್ಷತೆಗೂ ಮುನ್ನವೇ ವಧುವಿನ ಸಂಬಂಧಿಕರಿಗೆ ಅನಾಮಧೇಯ ಫೋನ್ ಕರೆಯೊಂದು ಬಂದಿದ್ದು, ನಿಮ್ಮ ಮಗಳನ್ನು ಮದುವೆಯಾಗುತ್ತಿರುವ ವರನಿಗೆ ಮೊದಲೇ ಮದುವೆಯಾಗಿದೆ ಮತ್ತು ಮಕ್ಕಳು ಇವೆ ಎಂದು ಹೇಳಿದ್ದಾರೆ. ಇದರಿಂದ ಅನುಮಾನಗೊಂಡ ವಧುವಿನ ಕುಟುಂಬಸ್ಥರು ಆರತಕ್ಷತೆಗೂ ಮುನ್ನವೇ ಮದುವೆಯನ್ನು ನಿಲ್ಲಿಸಿದ್ದಾರೆ. ಅಲ್ಲದೆ ಅದೇ ವಧುವಿಗೆ ಬೇರೆ ಹುಡುಗನ ಜೊತೆ ಮದುವೆ ಮಾಡಲು ತೀರ್ಮಾನಿಸಿದ್ದಾರೆ.
ಇದರಿಂದ ಗಾಬರಿಗೊಂಡ ವರ ಬಸವರಾಜು ಆರೋಪ ಸಾಬೀತು ಮಾಡುವಂತೆ ಪಟ್ಟುಹಿಡಿದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಈ ವಿಚಾರವಾಗಿ ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಮಧ್ಯ ರಾತ್ರಿಯವರೆಗೆ ಠಾಣೆಯಲ್ಲಿ ಹೈಡ್ರಾಮ ನಡೆದಿದೆ. ಅಂತಿಮವಾಗಿ ಮದುವೆಗೆ ನಿರಾಕರಿಸಿದ ಹೆಣ್ಣಿನ ಮನೆಯವರು, ಬೇರೆ ವರನೊಂದಿಗೆ ಮದುವೆ ಮಾಡಲು ತೀರ್ಮಾನ ಮಾಡಿದ್ದಾರೆ.