ರಾಮನಗರ: ಬೆಂಗಳೂರಿನಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಪರ ನಡೆಯುತ್ತಿರುವ ಪ್ರತಿಭಟನೆಗೆ ನನಗೆ ಆಹ್ವಾನ ನೀಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆಶಿ ಬಂಧನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮವರಿಗೆ ಪ್ರತಿಭಟನೆ ರ್ಯಾಲಿಗೆ ಬೆಂಬಲ ಕೊಡಲು ಹೇಳಿದ್ದೇನೆ. ನಮ್ಮ ಎಲ್ಲ ಕಾರ್ಯಕರ್ತರು ಭಾಗವಹಿಸಿದ್ದಾರೆ. ಇಲ್ಲಿಯ ಈ ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ಅಲ್ಲದೆ ನನ್ನ ಗಮನಕ್ಕೆ ತರದೇ ತರಾತುರಿಯಲ್ಲಿ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಅಲ್ಲದೇ ಮೊದಲೇ ಹೇಳಿದ್ದರೆ ಅಥವಾ ಇನ್ವಿಟೇಷನ್ ನೀಡುತ್ತಿದ್ದರೆ ನಾನು ಭಾಗವಹಿಸುತ್ತಿದ್ದೆ. ಅದರಲ್ಲಿ ಏನು ಇದೆ. ಒಟ್ಟಿನಲ್ಲಿ ನನಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂದು ತಿಳಿಸಿದರು.
ಎಚ್ಡಿಕೆಯವರನ್ನ ಪ್ರಕರಣಗಳಲ್ಲಿ ಸಿಕ್ಕಿಸಲು ಯತ್ನ ನಡೆಯುತ್ತಿದೆ ಎಂಬ ವಿಚಾರದ ಕುರಿತು ಮಾತನಾಡಿದ ಮಾಜಿ ಸಿಎಂ, ಪ್ರಕರಣಗಳಲ್ಲಿ ನನ್ನನ್ನ ಫಿಕ್ಸ್ ಮಾಡಲು ಅವರಿಗೆ ಆಗುವುದಿಲ್ಲ. ನನ್ನ ಜೀವನದಲ್ಲಿ ತಪ್ಪುಗಳಿಗೆ ಅವಕಾಶ ಕೊಟ್ಟಿಲ್ಲ ಎಂದು ತಿಳಿಸಿದರು.
ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ಬೆಂಗಳೂರಿನಲ್ಲಿ ಇಂದು ಒಕ್ಕಲಿಗರು ಪ್ರತಿಭಟನೆ ನಡೆಸಿದರು. ಈ ಮಧ್ಯೆ ಎಚ್ ಡಿಕೆ ಅವರು ತಮ್ಮ ಸ್ವಕ್ಷೇತ್ರಕ್ಕೆ ಪ್ರವಾಸ ಕೈಗೊಂಡಿದ್ದು, ಇಂದಿನ ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ. ಈ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಎಚ್ ಡಿಕೆ ಅವರು ಮೊದಲೇ ನಿಗದಿಯಾಗಿದ್ದಂತೆ ವಿವಿಧ ಕಾರ್ಯಕ್ರಮ, ಕೆಡಿಪಿ ಸಭೆ ಸೇರಿದಂತೆ ಹಲವು ಸಭೆಯಲ್ಲಿ ಭಾಗವಹಿಸಲೆಂದು ಇಂದು ಚನ್ನಪಟ್ಟಣಕ್ಕೆ ಬಂದಿದ್ದಾರೆ. ಇಲ್ಲಿಂದ ಸಂಜೆ ಮೈಸೂರಿಗೆ ತೆರಳಲಿದ್ದಾರೆ. ನಾಳೆ ಮೈಸೂರಿನಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.