ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮುಂದೆ ನಿಂತು ಮಾತನಾಡುವ ಧಮ್, ತಾಕತ್ತು ಇದ್ದಿದ್ದು ಯಡಿಯೂರಪ್ಪ (BS Yediyurappa) ಅವರಿಗೆ ಮಾತ್ರ. ಉಳಿದವರೆಲ್ಲಾ ಶೂನ್ಯ ಎಂದು ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಕುಟುಕಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ (BJP Leaders) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂಸತ್ತಿನಲ್ಲಿ ಯಾರಾದ್ರೂ ಕರ್ನಾಟಕದ ಬಗ್ಗೆ ಮಾತಾಡ್ತಾರಾ? 25 ಜನ ಸಂಸದರಿಗೆ ಮೋದಿ ಎದುರಿಗೆ ನಿಂತು ಮಾತನಾಡುವ ಧೈರ್ಯವಿಲ್ಲ. ಆ ಧೈರ್ಯ ಯಡಿಯೂರಪ್ಪ ಅವರಿಗೆ ಮಾತ್ರ ಇತ್ತು. ಈಗ ದೆಹಲಿಗೆ ಹೋಗುವ ಎಂಪಿಗಳು ಸುಮ್ಮನೆ ಹೋಗ್ತಾರೆ. ತಿರುಪತಿಗೆ ಹೋಗಿ ವೆಂಕಟರಮಣಸ್ವಾಮಿಗೆ ನಮಸ್ಕಾರ ಹಾಕುವ ರೀತಿ, ದೆಹಲಿಗೆ ಹೋಗಿ ಮೋದಿಗೆ ನಮಸ್ಕಾರ ಹಾಕಿ ಬರ್ತಾರೆ ಅಷ್ಟೇ ಎಂದು ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ರಾಜ್ಯವ್ಯಾಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಸಚಿವರು, ಕಾಂಗ್ರೆಸ್ ಬಹಳ ಸ್ಪಷ್ಟವಾಗಿ 10 ಕೆಜಿ ಕೊಡ್ತೀವಿ ಅಂತಾ ಹೇಳಿದೆ, ಏನೇ ಆದ್ರೂ ಕೊಟ್ಟೆ ಕೊಡ್ತೀವಿ. ಬಿಜೆಪಿ ಅಧಿಕಾರಕ್ಕೆ ಬಂದಾಗ 4 ಕೆ.ಜಿ ಇಳಿಸಿದ್ದರು, ಅವರಿಗೆ ಬಿಪಿಎಲ್ ಕಾರ್ಡ್ದಾರರ ಮೇಲೆ ಅನುಕಂಪ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೋಮು ಗಲಭೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 25 ಲಕ್ಷ ಪರಿಹಾರ – ಶೀಘ್ರದಲ್ಲೇ ಸರ್ಕಾರಿ ಉದ್ಯೋಗ
ಕೇಂದ್ರ ಸರ್ಕಾರ ಕೇಳಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ರಾ ಎಂಬ ಬಿಜೆಪಿ ಹೇಳಿಕೆ ತಿರುಗೇಟು ನೀಡಿದ ಸಚಿವರು, ಕೇಂದ್ರ ಸರ್ಕಾರ ಯಾರದ್ದು ಬಿಜೆಪಿ ಅವರೇ? ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಆಡಳಿತ ಮಾಡ್ತಿದೆ. ಸಮಸ್ತ ಜನರ ಸರ್ಕಾರ ಅದು. ಅವರು ಕೊಡದಿದ್ರೆ ಮಾರುಕಟ್ಟೆಯಿಂದ ಅಕ್ಕಿ ತಂದು ಕೊಡ್ತೀವಿ. ಮಾತಿಗೆ ತಪ್ಪೋಕೆ ನಾವೇನು ಬಿಜೆಪಿಯವರಾ? ನಮ್ಮಲ್ಲಿ ಇರುವ ದೊಡ್ಡ-ದೊಡ್ಡ ನಾಯಕರು ಕೇಂದ್ರ ಸರ್ಕಾರಕ್ಕೆ ಹೇಳಬೇಕು. ಅಕ್ಕಿ ಕೊಡಲಿಲ್ಲ ಪ್ರತಿಭಟನೆ ಮಾಡ್ತೀವಿ ಅಂತಾರೆ, ನಾಚಿಕೆ ಆಗಬೇಕು ಬಿಜೆಪಿ ನಾಯಕರಿಗೆ ಎಂದು ತಿವಿದಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಮತ್ತೆ ಬುಲ್ಡೋಜರ್ ಸದ್ದು – ರಾಜಕಾಲುವೆ ಒತ್ತುವರಿ ತೆರವು ವೇಳೆ ಭಾರೀ ಹೈಡ್ರಾಮಾ