ಬೆಂಗಳೂರು: ಬಿಜೆಪಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಬಿಜೆಪಿ ಶಾಸಕರಿಗೆ ಹೆಚ್ಚಿನ ಅನುದಾನ ನೀಡಿ, ಕಾಂಗ್ರೆಸ್ ಶಾಸಕರಿಗೆ ಕಡಿಮೆ ಅನುದಾನ ನೀಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ. ಬಿಜೆಪಿ ಶಾಸಕರಿಗೊಂದು, ನಮಗೊಂದು ಮಾಡುತ್ತಿದೆ. ಬಜೆಟ್ನಲ್ಲೂ ನಮಗೆ ಹೆಚ್ಚಿನ ಅನುದಾನ ನೀಡಿಲ್ಲ. ಬಿಜೆಪಿ ಶಾಸಕರಿಗೆ ಹೆಚ್ಚಿನ ಅನುದಾನ ನೀಡಿದೆ. ಕಾಂಗ್ರೆಸ್ ಶಾಸಕರಿಗೆ ಕಡಿಮೆ ಅನುದಾನ ನೀಡಿದೆ. ಬಿಜೆಪಿ ಶಾಸಕರಿಗೆ ಒಟ್ಟು 9,880 ಕೋಟಿ ರೂ. ನೀಡಿದೆ. ಕಾಂಗ್ರೆಸ್ ಶಾಸಕರಿಗೆ 2,186 ಕೋಟಿ ರೂ. ಕೊಟ್ಟಿದೆ. 2021/22ನೇ ಸಾಲಿನಲ್ಲಿ ಬಿಜೆಪಿಗೆ 2,658 ಕೋಟಿ ರೂ. ನೀಡಿದ್ದು, ಕಾಂಗ್ರೆಸ್ ಶಾಸಕರಿಗೆ 833 ಕೋಟಿ ರೂ. ನೀಡಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಈ ತಾರತಮ್ಯ ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಗೆ ಹೀನಾಯ ಸೋಲು – ಬಿಜೆಪಿಗಿಂತಲೂ, ಕಾಂಗ್ರೆಸ್ಗೆ ಡೇಂಜರ್ ಆ ಪಕ್ಷ!
ನಾನು ಸದನದಲ್ಲೂ ಇದನ್ನು ಪ್ರಸ್ತಾಪಿಸುತ್ತೇನೆ. ಸಮಗ್ರ ಬೆಂಗಳೂರು ಅಭಿವೃದ್ಧಿ ಹೇಗಾಗುತ್ತದೆ. ಕೆಲವರಿಗೆ ಹೆಚ್ಚು, ಕೆಲವರಿಗೆ ಕಡಿಮೆ ಅಂದರೆ ಹೇಗೆ?. ನಮ್ಮ ಕ್ಷೇತ್ರಕ್ಕೆ ಕಡಿಮೆ ಅನುದಾನ ನೀಡಲಾಗಿದೆ ಇದರ ಬಗ್ಗೆ ಪ್ರತಿಭಟನೆ ಮಾಡುತ್ತೇವೆ ಎಂದಿದ್ದೆವು. ಆದರೆ ಅಧಿಕಾರಿಗಳು ಭರವಸೆ ಕೊಟ್ಟಿದ್ದರು ಅನುದಾನ ಕೊಡುವ ಭರವಸೆ ಪ್ರಧಾನ ಕಾರ್ಯದರ್ಶಿ ನೀಡಿದ್ದರು. ಆದರೆ ಇಲ್ಲಿಯವರೆಗೆ ಅನುದಾನ ಕೊಟ್ಟಿಲ್ಲ. ಸೋಮವಾರ ಸದನದಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತೇನೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕುಮಾರಸ್ವಾಮಿ ಅಲ್ಲ, ಯಾರೇ ಟಾರ್ಗೆಟ್ ಮಾಡಿದರೂ ನಾನು ಹೆದರಲ್ಲ: ಸಿದ್ದರಾಮಯ್ಯ
ನಮ್ಮ ಅವಧಿಯಲ್ಲಿ ನಾವು ತಾರತಮ್ಯ ಮಾಡಿರಲಿಲ್ಲ. ಹೆಚ್ಚಿನ ಅನುದಾನವನ್ನೇ ಅವರಿಗೆ ಕೊಟ್ಟಿದ್ದೆವು. ಬೇಕಾದರೆ ಅದರ ಅಂಕಿಅಂಶಗಳನ್ನು ನೋಡಲಿ. ಬಿಜೆಪಿಯ 15 ಶಾಸಕರ ಕ್ಷೇತ್ರಗಳಿಗೆ ಮಾತ್ರ ಹೆಚ್ಚು ಅನುದಾನ ನೀಡಿದರೆ ಸಮಗ್ರ ಬೆಂಗಳೂರು ಅಭಿವೃದ್ದಿಯಾಗುತ್ತಾ? ಎಂದು ಅಸಮಾಧಾನ ಹೊರಹಾಕಿದ್ದಾರೆ.