ಬೆಂಗಳೂರು: ಕ್ಷೇತ್ರದಲ್ಲಿಲ್ಲ ಅನ್ನೋ ಕೊರಗು ನಮಗಿದೆ. ಆದರೂ ನಮ್ಮ ಆಪ್ತ ಸಹಾಯಕರು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಹೇಳಿದ್ದಾರೆ.
ರಮಡ ರೆಸಾರ್ಟ್ ಬಳಿ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿ ಸದಸ್ಯರು, ಕಾರ್ಯಕರ್ತರು ನಮ್ಮ ಅನುಪಸ್ಥಿತಿಯಲ್ಲಿಯೂ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಎದುರಾಗಿರುವ ರಾಜಕೀಯ ಸನ್ನಿವೇಶ ಸರ್ವೇ ಸಾಮಾನ್ಯ. ರಾಮಾಯಣ, ಮಹಾಭಾರತ ಕಾಲದಿಂದಲೂ ರಾಜಕೀಯ ದಾಹ ಇದ್ದೇ ಇದೆ. ಸೋಮವಾರ ನಮ್ಮ ಧರ್ಮಯುದ್ಧದಲ್ಲಿ ನಾವು ಜಯಗಳಿಸುತ್ತೇವೆ ಎಂಬ ಭರವಸೆ ನನಗಿದೆ ಎಂದು ಹೇಳಿದರು.
ರೆಸಾರ್ಟಿನಲ್ಲಿ ನಾವು ಅತ್ಯಂತ ವೈಭವದ ಜೀವನ ನಡೆಸುತ್ತಿಲ್ಲ. ಮಾಮೂಲಿ ಊಟ, ತಿಂಡಿ, ನಮ್ಮ ಮನೆಯಲ್ಲಿರುವ ರೀತಿ ಬೆಡ್, ಬಾತ್ ರೂಂ ಇಲ್ಲಿದೆ. ಬೇರೆ ರೆರ್ಸಾಟಿನಲ್ಲಿ ಐಷಾರಾಮಿ ವ್ಯವಸ್ಥೆ ಇರಬಹುದು. ಆದರೆ ಈ ರಮಡ ರೆಸಾರ್ಟಿನಲ್ಲಿ ಅಂತಹ ವ್ಯವಸ್ಥೆ ಇಲ್ಲ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ವಿಶ್ವಾಸ ಮತಯಾಚನೆಯನ್ನು ಮತಕ್ಕೆ ಹಾಕುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಸ್ಪೀಕರ್ ರಮೇಶ್ ಕುಮಾರ್ ಅವರು ಮತ ಎಣಿಕೆಗೆ ಹಾಕುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಈ ಮೂಲಕ ಸಮ್ಮಿಶ್ರ ಸರ್ಕಾರ ಬಹುಮತ ಸಾಬೀತುಪಡಿಸದೇ ಬಿದ್ದು ಹೋಗಲಿದೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಶಾಸಕ ಸುನೀಲ್ ನಾಯಕ್, ಇಲ್ಲಿದ್ದುಕೊಂಡೇ ನಮ್ಮ ಕ್ಷೇತ್ರದ ಜನರಿಗೆ ಬೇಕಾದ ಸ್ಪಂದನೆ ಕೊಟ್ಟಿದ್ದೇವೆ. ನಮ್ಮ ಅಜೆಂಡಾ ಒಂದೇ ಬಿ.ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಮಾಡುವುದು. ಸಮ್ಮಿಶ್ರ ಸರ್ಕಾರ ತೊಲಗಿಸಬೇಕು ಎಂದರು.
ಕಡತ ವಿಲೇವಾರಿ ಕೂಡ ಜೋರಾಗಿ ನಡೆಯುತ್ತಿದೆ. ಬಹುಮತ ಇಲ್ಲದಿದ್ದರೂ ಕಾಲಹರಣ ಮಾಡುತ್ತಿದ್ದಾರೆ. ಸೋಮವಾರ ನಮಗೆ ಗೆಲುವು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.