ರಾಯಚೂರು: ಶ್ರೀರಾಮನವಮಿ (Rama Navami) ಹಿನ್ನೆಲೆ ಮಂತ್ರಾಲಯದ (Mantralayam) ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಬ್ರಹ್ಮ ಕರಾರ್ಚಿತ ಮೂಲ ರಾಮದೇವರು ಹಾಗೂ ಇತರ ಸಂಸ್ಥಾನ ಮೂರ್ತಿಗಳಿಗೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಮಹಾ ಅಭಿಷೇಕವನ್ನು ನೆರವೇರಿಸಿದರು.
ಅಭಿಷೇಕದ ನಂತರ ಮೂಲರಾಮದೇವರು, ದಿಗ್ವಿಜಯ ರಾಮದೇವರು ಮತ್ತು ಜಯರಾಮದೇವರುಗಳಿಗೆ ಗಂಧ ಲೇಪನವನ್ನು ಅರ್ಪಿಸಿದರು ಬಳಿಕ ಸಂಸ್ಥಾನ ಪೂಜೆ ನೆರವೇರಿಸಲಾಯಿತು. ಮಹಾ ಅಭಿಷೇಕ ಶ್ರೀ ಮಠದಲ್ಲಿ ಅಪರೂಪದ ಮತ್ತು ಅತ್ಯಂತ ಮಹತ್ವದ ಆಚರಣೆಯಾಗಿದ್ದು, ವರ್ಷಕ್ಕೆ ಎರಡು ಬಾರಿ ಮಾತ್ರ ನೆರವೇರಿಸಲಾಗುತ್ತದೆ. ಶ್ರೀರಾಮ ನವಮಿಯ ಮಂಗಳಕರ ದಿನದಂದು ಮತ್ತು ಬಲಿ ಪಾಡ್ಯಮಿಯಂದು ಮಾತ್ರ ನಡೆಸಲಾಗುತ್ತದೆ. ಈ ವೇಳೆ ಪ್ರತಿವರ್ಷದಂತೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ರಾಯರ ಕೃಪೆಗೆ ಪಾತ್ರರಾದರು. ಇದನ್ನೂ ಓದಿ: ರಾಮನವಮಿ ಸಡಗರ – ರಾಯಚೂರಿನ ದೇವಾಲಯಗಳಲ್ಲಿ ನಿರಂತರ ಪೂಜೆ, ಭಕ್ತರಿಗೆ ಅನ್ನಸಂತರ್ಪಣೆ
ಇನ್ನೂ ಶ್ರೀ ರಾಮನವಮಿಯನ್ನ ರಾಯಚೂರಿನಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಗರದ ರಾಮ ಮಂದಿರ, ಕೋದಂಡರಾಮ ದೇವಾಲಯ ಸೇರಿದಂತೆ ರಾಮನ ದೇವಾಲಯಗಳಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಭಕ್ತರಿಗೆ ಪಾನಕ, ಪ್ರಸಾದ ,ಅನ್ನಸಂತರ್ಪಣೆ ನಡೆಯುತ್ತಿದೆ. ನಗರದ ರಾಮ ಮಂದಿರದಲ್ಲಿ ರಾಮ ಉತ್ಸವ ನಡೆಯಲಿದೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಯುಗಾದಿ ಸಂಭ್ರಮ – ಮೂಲ ರಾಮದೇವರಿಗೆ ತೈಲ ಅಭ್ಯಂಗನ

