ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೇ ಹೊರತು ಮಸೀದಿ ಅಲ್ಲ, ರಾಮಮಂದಿರ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದಾಗಿ ಕೇಂದ್ರ ಶಿಯಾ ವಕ್ಫ್ ಮಂಡಳಿ ಶುಕ್ರವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ರಾಮಮಂದಿರ ಹಾಗೂ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸುಪ್ರೀಂ ಕೋರ್ಟ್ ಶುಕ್ರವಾರ ವಿಚಾರಣೆಯನ್ನು ನಡೆಸಿತ್ತು. ಈ ವೇಳೆ ಸುಪ್ರಿಂ ಕೋರ್ಟ್ ಗೆ ಕೇಂದ್ರ ಶಿಯಾ ವಕ್ಫ್ ಮಂಡಳಿಯು ಅಲಹಾಬಾದ್ ಹೈಕೋರ್ಟ್ ತಮಗೆ ನೀಡಿರುವ ಮೂರನೇ ಒಂದರಷ್ಟು ಭೂಮಿಯನ್ನು ರಾಮ ಮಂದಿರ ನಿರ್ಮಾಣ ಮಾಡುವುದಕ್ಕೆ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಶ್ರೇಷ್ಠ ರಾಷ್ಟ್ರದ ಒಗ್ಗಟ್ಟು, ಐಕ್ಯತೆ, ಶಾಂತಿ, ಸೌಹಾರ್ದತೆಗಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿಯನ್ನು ನೀಡುತ್ತಿದ್ದೇವೆ. ಅಯೋಧ್ಯೆ ರಾಮನ ಜನ್ಮಭೂಮಿಯಾಗಿದ್ದು, ಅಲ್ಲಿ ರಾಮ ಮಂದಿರ ಮಾತ್ರ ನಿರ್ಮಾಣವಾಗಬೇಕು, ಮಸೀದಿ ನಿರ್ಮಾಣವಾಗಲು ಸಾಧ್ಯವಿಲ್ಲ ಎಂದು ವಕ್ಫ್ ಮಂಡಳಿ ಪರ ವಕೀಲರು ಕೋರ್ಟ್ ಗೆ ಹೇಳಿದ್ದಾರೆ.
There was never a Masjid on that site in Ayodhya and there can never be a Masjid there. It is the birthplace of Lord Ram and only a Ram Temple will be built. Sympathizers of Babar are destined to lose: Waseem Rizvi,UP Shia Central Waqf Board Chairman pic.twitter.com/d30C5GqYOs
— ANI (@ANI) July 13, 2018
ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ವಕ್ಫ್ ಮಂಡಳಿ ಅಧ್ಯಕ್ಷರಾದ ವಾಸೀಮ್ ರಿಜ್ವಿಯವರು, ಅಯೋಧ್ಯೆಯಲ್ಲಿ ಹಿಂದಿನಿಂದಿಲೂ ಯಾವುದೇ ಮಸೀದಿಗಳಿರಲಿಲ್ಲ, ಅಲ್ಲಿ ಮುಂದೆಯೂ ಮಸೀದಿ ನಿರ್ಮಾಣ ಸಾಧ್ಯವಿಲ್ಲ. ಅದು ರಾಮನ ಜನ್ಮಭೂಮಿಯಾಗಿದ್ದು, ಅಲ್ಲಿ ರಾಮಮಂದಿರ ನಿರ್ಮಾಣವೇ ಹೊರತು, ಮಸೀದಿ ನಿರ್ಮಾಣ ಅಲ್ಲ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೇ ರಾಮಮಂದಿರ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಇಚ್ಛಿಸುತ್ತೇವೆ. ಬಾಬ್ರಿ ಮಸೀದಿಗೆ ಸಂಬಂಧಿಸಿದಂತೆ ಶಿಯಾ ವಕ್ಫ್ ಮಂಡಳಿಗೆ ಮಾತ್ರ ನಿರ್ಧಾರ ಕೈಗೊಳ್ಳುವ ಅಧಿಕಾರವಿದ್ದು, ಸುನ್ನಿ ಅಥವಾ ದೇಶದ ಇನ್ನಿತರ ಯಾವುದೇ ಮುಸ್ಲಿಂ ಸಂಘಟನೆಗಳಿಗೆ ಅಧಿಕಾರವಿಲ್ಲ ಎಂದು ಹೇಳಿದ್ದಾರೆ.
ಶಿಯಾ ವಕ್ಫ್ ಮಂಡಳಿಯ ನಿರ್ಧಾರ ಕುರಿತು ಪ್ರತಿಕ್ರಿಯಿಸಿದ ಸುನ್ನಿ ವಕ್ಫ್ ಮಂಡಳಿಯ ಹಿರಿಯ ವಕೀಲರಾದ ರಾಜೀವ್ ಧವನ್, ಶಿಯಾ ವಕ್ಫ್ ಮಂಡಳಿಗೆ ರಾಮ ಮಂದಿರ ನಿರ್ಮಾಣ ಕುರಿತು ಯಾವುದೇ ಹೇಳಿಕೆಯನ್ನು ನೀಡುವ ಅಧಿಕಾರವಿಲ್ಲ, ಅಲ್ಲದೇ ತಾಲಿಬಾನಿಗಳು ಬುದ್ಧರ ಬಮಿಯಾನ್ ಗುಹಾಲಯಗಳನ್ನು ಧ್ವಂಸ ಮಾಡಿದ ರೀತಿ, ಭಾರತೀಯ ಹಿಂದೂ ತಾಲಿಬಾನಿಗಳು ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದೆ ಎಂದು ಹೇಳಿದ್ದಾರೆ.