ರಾಯಚೂರು: ನಗರದ ತಾಲೂಕಿಗೆ ನಿರಂತರ 24 ಗಂಟೆ ವಿದ್ಯುತ್ ನೀಡಲು ಆಗ್ರಹಿಸಿ ರಾಯಚೂರಿನ ಜೆಡಿಎಸ್, ಬಿಜೆಪಿ ಶಾಸಕರು ನಡೆಸುತ್ತಿರುವ ಪಾದಯಾತ್ರೆ ನಾಲ್ಕನೇಯ ದಿನಕ್ಕೆ ಕಾಲಿಟ್ಟಿದೆ. ಯರಮರಸ್ ಗ್ರಾಮದಿಂದ ಇಂದು ಪಾದಯಾತ್ರೆ ಆರಂಭಿಸಿರುವ ಜೆಡಿಎಸ್ ಶಾಸಕ ಡಾ.ಶಿವರಾಜ್ ಪಾಟೀಲ್, ಬಿಜೆಪಿ ಶಾಸಕ ತಿಪ್ಪರಾಜು ಹವಾಲ್ದಾರ್ ಆರ್ ಟಿಪಿಎಸ್ ವರೆಗೆ ಪಾದಯಾತ್ರೆ ನಡೆಸಲಿದ್ದಾರೆ.
ಸರ್ಕಾರ ಸ್ಪಂದಿಸಿ ವಿದ್ಯುತ್ ಹಾಗೂ ಭೂಸಂತ್ರಸ್ಥರ ಕಷ್ಟಗಳಿಗೆ ಸ್ಪಂದಿಸಿದಲ್ಲಿ ಹೋರಾಟ ಇಂದು ಅಂತಿಮಗೊಳ್ಳಲಿದೆ. ಇಲ್ಲದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಇಬ್ಬರು ಶಾಸಕರು ಎಚ್ಚರಿಕೆ ನೀಡಿದ್ದಾರೆ.
ದೇವಸುಗೂರು ಗ್ರಾಪಂ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿ ಮಾಡಿದ್ದು ಆರ್ ಟಿಪಿಎಸ್ ಬಳಿ ಹೋರಾಟ ಮಾಡದಂತೆ ಈಗಾಗಲೇ ಜಿಲ್ಲಾಡಳಿತ ನೋಟಿಸ್ ನೀಡಿದ್ದರೂ ಪಾದಯಾತ್ರೆ ಮುಂದುವರಿದಿದೆ. ನೂರಾರು ಜನ ಬೆಂಬಲಿಗರೊಂದಿಗೆ ಶಾಸಕರು ಪಾದಯಾತ್ರೆ ನಡೆಸುತ್ತಿದ್ದಾರೆ.
ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು 4 ಜನ ಡಿಎಸ್ಪಿ, 10 ಸಿಪಿಐ, 15 ಪಿಎಸ್ಐ, 300 ಜನ ಸಿಬ್ಬಂದಿ, ಎರಡು ಕೆಎಸ್ಆರ್ಪಿ, ಎರಡು ಡಿಎಆರ್ ನೇಮಿಸಲಾಗಿದೆ.