ಕಳೆದ ಎರಡು ವಾರಗಳಿಂದ ಬಾಲಿವುಡ್ ನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರದ್ದೇ ಸುದ್ದಿ. ಸದ್ಯ ಅಮೆರಿಕಾದಲ್ಲಿ ಬೀಡುಬಿಟ್ಟು, ಹಾಲಿವುಡ್ ಸಿನಿಮಾಗಳನ್ನು ಮಾಡುತ್ತಿರುವ ಪ್ರಿಯಾಂಕಾ ಮೊನ್ನೆಯಷ್ಟೇ ಬಾಲಿವುಡ್ ಬಗ್ಗೆ ಮಾತನಾಡಿದ್ದರು. ಇಲ್ಲಿನ ರಾಜಕಾರಣದ ಬಗ್ಗೆ ಕಿಡಿಕಾರಿದ್ದರು. ತಾರತಮ್ಯದ ಪಟ್ಟಿಯನ್ನೇ ಬಿಚ್ಚಿಟ್ಟಿದ್ದರು. ಅವರ ಮಾತು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಪ್ರಿಯಾಂಕಾ ಚೋಪ್ರಾಗೆ ಬಾಲಿವುಡ್ ನಲ್ಲಿ ಆದ ಅನ್ಯಾಯಗಳ ಪಟ್ಟಿ ಒಂದೊಂದೇ ಹೊರ ಬರುತ್ತಿದ್ದಂತೆಯೇ ಬಾಲಿವುಡ್ ಮೌನಕ್ಕೆ ಜಾರಿತು. ಹಾಗಂತ ಕಂಗನಾ ರಣಾವತ್ (Kangana Ranaut) ಸುಮ್ಮನಿರಲಿಲ್ಲ. ಪ್ರಿಯಾಂಕಾಗೆ ಅನ್ಯಾಯವಾಗಿದ್ದು ಕರಣ್ ಜೋಹರ್ನಿಂದ ಎಂದು ನೇರವಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡರು. ಈ ವಿಚಾರದಲ್ಲಿ ಪ್ರಿಯಾಂಕಾ ಪರ ಇರುತ್ತೇನೆ ಎಂದು ಘೋಷಿಸಿದರು. ಅಲ್ಲಿಗೆ ಚರ್ಚೆ ಮತ್ತೊಂದು ಹಾದಿ ಹಿಡಿಯಿತು. ಇದನ್ನೂ ಓದಿ: Exclusive: ರಾಜಕೀಯ ಅಖಾಡಕ್ಕೆ ನಿರ್ಮಾಪಕ ಕೆ.ಮಂಜು
ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಾಖಿ ಸಾವಂತ್ (Rakhi Sawant) ಕೂಡ ಮಾತನಾಡಿದ್ದಾರೆ. ಪ್ರಿಯಾಂಕಾ ಚೋಪ್ರಾನ ತರಾಟೆಗೆ ತೆಗೆದುಕೊಂಡಿರುವ ರಾಖಿ, ಎಲ್ಲಿಂದಲೋ ಬರುತ್ತೀರಿ, ಸಿಹಿ ಸವಿಯುತ್ತೀರಿ. ಮತ್ತೆ ಅದೇ ರಂಗದ ಬಗ್ಗೆ ಕೆಟ್ಟದ್ದಾಗಿ ಮಾತನಾಡುತ್ತೀರಿ. ಇದು ಸರಿಯಲ್ಲ. ಯಾವಾಗ ನಿಮಗೆ ನೋವಾಗಿತ್ತೋ, ಅವತ್ತೇ ಆ ಕುರಿತು ಮಾತನಾಡಬೇಕು ಎಂದು ರಾಖಿ ಹೇಳಿದ್ದಾರೆ. ನೀವು ಬಾಲಿವುಡ್ ಬಿಟ್ಟು ತುಂಬಾ ವರ್ಷಗಳೇ ಆಗಿವೆ. ಈ ಕುರಿತು ನೀವು ಮಾತನಾಡಬಾರದು ಎಂದಿದ್ದಾರೆ.
ಪ್ರಿಯಾಂಕಾ ಚೋಪ್ರಾ ಆಡಿದ ಮಾತುಗಳು ಸುಳ್ಳು. ಇಲ್ಲಿ ಯಾರಿಗೂ ಮೋಸ ಆಗುವುದಿಲ್ಲ. ಅನೇಕರು ಬದುಕನ್ನು ಕಟ್ಟಿಕೊಂಡಿದ್ದಾರೆ. ಪ್ರಿಯಾಂಕಾ ಯಾಕೆ ಆ ರೀತಿ ಮಾತನಾಡಿದ್ದಾರೋ ಗೊತ್ತಿಲ್ಲ. ಅವರ ತಾಯಿ ನನಗೆ ತುಂಬಾ ಪರಿಚಯ. ಹಾಗಾಗಿ ಈ ವಿಷಯದಲ್ಲಿ ನಾನು ತಟಸ್ಥ ರೀತಿಯಲ್ಲಿ ನಿಂತು ಮಾತನಾಡುತ್ತೇನೆ ಎಂದಿದ್ದಾರೆ ರಾಖಿ.