ಬೆಂಗಳೂರು: ಜೆಡಿಎಸ್ ನಾಯಕರೇ ಯಾರಿಂದಲೋ ಅಡ್ಡ ಮತದಾನ ಮಾಡಿಸಿ ನಮ್ಮ ವಿರುದ್ದ ದೂರಿದ್ದಾರೆ ಎಂದು ಜೆಡಿಎಸ್(JDS) ಬಂಡಾಯ ಶಾಸಕ ಎಸ್.ಆರ್.ಶ್ರೀನಿವಾಸ್(S R Srinivas) ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಎಚ್ಡಿ ರೇವಣ್ಣ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ(Rajya Sabha Election) ಅಡ್ಡ ಮತದಾನ(Cross Voting) ಮಾಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ನೀಡಿದ ದೂರಿಗೆ ಎಸ್.ಆರ್.ಶ್ರೀನಿವಾಸ್ ವಿಧಾನಸಭೆ ಕಾರ್ಯದರ್ಶಿಗೆ ವಕೀಲರ ಮೂಲಕ ಉತ್ತರಿಸಿದ್ದಾರೆ. ನಾನು ಈವರೆಗೂ ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನಾನು ಜೆಡಿಎಸ್ ಬೆಂಬಲಿತ ಕುಪೇಂದ್ರರೆಡ್ಡಿಗೆ(Kupendra Reddy) ಮತ ಹಾಕಿದ್ದೇನೆ ಎಂದು ತಿಳಿಸಿದ್ದಾರೆ.
ಉತ್ತರದಲ್ಲಿ ಏನಿದೆ?
ಜೆಡಿಎಸ್ ನಾಯಕರು ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಲ್ಲೇ ಗುಬ್ಬಿ ಕ್ಷೇತ್ರದಲ್ಲಿ ಸಮಾವೇಶ ಮಾಡಿ ಪರ್ಯಾಯ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ಆದರೂ ನಾನು ಪಕ್ಷದ ಸಭೆ ಸಮಾರಂಭಗಳಲ್ಲಿ ಭಾಗಿಯಾಗಿದ್ದೇವೆ. ನಾನು ಈವರೆಗೂ ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ.
ಜೂನ್ 10 ರಂದು ಖಾಲಿ ಬ್ಯಾಲೆಟ್ ಪೇಪರ್ ಹಾಕಿದ್ದಾರೆ ಎಂದು ಎಚ್ಡಿ ಕುಮಾರಸ್ವಾಮಿ, ಎಚ್ಡಿ ರೇವಣ್ಣ ಹೇಳಿದ್ದಾರೆ. ಅದೇ ದಿನ ರಾತ್ರಿ ಹೆಬ್ಬೆಟ್ಟು ಇಟ್ಟು ಮತದಾನ ಮಾಡಿದ್ದಾರೆ ಎಂದು ಎಚ್ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಜೂನ್ 11 ರಂದು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ರೇವಣ್ಣ ಹೇಳಿಕೆ ಕೊಟ್ಟಿದ್ದಾರೆ. ಜೂನ್ 12 ರಂದು ಮೊದಲ ಪ್ರಾಶಸ್ತ್ಯ ಮತ ಕಾಂಗ್ರೆಸ್, 2ನೇ ಪ್ರಾಶಸ್ತ್ಯ ಬಿಜೆಪಿಗೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ಹೇಳಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ಹಾಟ್ಸ್ಪಾಟ್ನಲ್ಲಿ ಪ್ರಿಪೇಯ್ಡ್ ಕೌಂಟರ್ – ಆಟೋ ಚಾಲಕರ ಮಾಸ್ಟರ್ ಪ್ಲ್ಯಾನ್
ಉಚ್ಚಾಟನಾ ಪತ್ರದಲ್ಲಿ ಮೊದಲನೇ ಪ್ರಾಶಸ್ತ್ಯ ಮತ ಬಿಜೆಪಿಗೆ, ಎರಡನೇ ಪ್ರಾಶಸ್ತ್ಯ ಕಾಂಗ್ರೆಸ್ ಗೆ ಎಂದು ಉಲ್ಲೇಖಿಸಿದ್ದಾರೆ. ನೋಟಿಸ್ನಲ್ಲಿ ಖಾಲಿ ಬ್ಯಾಲೆಟ್ ಹಾಕಿರಬಹುದು, ಅಥವಾ ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ಮೊದಲನೇ ಪ್ರಾಶಸ್ತ್ಯ ಮತ ನೀಡಿರಬಹುದು ಎಂದು ಅಸ್ಪಷ್ಟ ಆರೋಪ ಮಾಡಿದ್ದಾರೆ. ನಾಯಕರ ಹೇಳಿಕೆಗಳು ಪದೇ ಪದೇ ಬದಲಾಗುತ್ತಿದ್ದು ಯಾವುದೇ ಸ್ಪಷ್ಟತೆ ಇಲ್ಲ. ಮೂರು ದ್ವಂದ್ವ ಹೇಳಿಕೆಗಳನ್ನು ಅವರೇ ಕೊಟ್ಟಿದ್ದಾರೆ.
ಈ ಹೇಳಿಕೆಗಳನ್ನು ಗಮನಿಸಿದರೆ ಜೆಡಿಎಸ್ ನಾಯಕರೇ ಯಾರಿಂದಲೋ ಅಡ್ಡ ಮತದಾನ ಮಾಡಿಸಿ ನಮ್ಮ ವಿರುದ್ದ ದೂರಿದ್ದಾರೆ. ಒಂದು ವೇಳೆ ಅಡ್ಡ ಮತದಾನ ಮಾಡಿದ್ದರೆ ಏಜೆಂಟ್ ಆಗಿದ್ದ ರೇವಣ್ಣ ಕೂಡಲೇ ತಕರಾರು ಮಾಡಬೇಕಿತ್ತು. ಆದರೆ ಅವರು ಯಾಕೆ ಪ್ರಶ್ನಿಸಲಿಲ್ಲ? ಕೇವಲ ಮಾಧ್ಯಮಗಳಲ್ಲಷ್ಟೇ ಹೇಳಿಕೆಗಳನ್ನ ಕೊಟ್ಟಿದ್ದಾರೆ. ಆದರೆ ನಾನು ಮತದಾನವಾದ ಕೂಡಲೇ ಟ್ವೀಟ್ ಮಾಡಿದ್ದೇನೆ. ನಮಗೆ ರಾಜಕೀಯವಾಗಿ ಕಿರುಕುಳ ನೀಡಲು ಈ ರೀತಿ ಷಡ್ಯಂತ್ರ ಮಾಡಿದ್ದಾರೆ ಎಂದು ಶ್ರೀನಿವಾಸ್ ತಮ್ಮ ಉತ್ತರದಲ್ಲಿ ನಾಯಕರ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.