ಬೆಂಗಳೂರು: ಕನ್ನಡ ಕಂಪಿನ ಅಚ್ಚಕನ್ನಡದ ‘ರಾಜು ಕನ್ನಡ ಮೀಡಿಯಂ’ ಸಿನಿಮಾ ಈಗ ಬಾಲಿವುಡ್ ಬೆಳ್ಳಿಪರದೆಗೆ ರಿಮೇಕ್ ಆಗಿ ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ಹಿಂದಿ ವರ್ಷನ್ನಲ್ಲಿ ಬಿಟೌನ್ ದಂಗಲ್ ಸ್ಟಾರ್ ಅಮೀರ್ ಖಾನ್ ಬಣ್ಣಹಚ್ಚೋ ಸಾಧ್ಯತೆಗಳಿವೆ ಎಂಬ ಸುದ್ದಿ ಸಿನಿ ಅಂಗಳದಲ್ಲಿ ಹರಿದಾಡುತ್ತಿದೆ.
ಕನ್ನಡದ ಸಿನಿಮಾಗಳಿಗೆ ಮಾರುಕಟ್ಟೆ ಇಲ್ಲ, ಬಿಗ್ ಬಜೆಟ್ನಲ್ಲಿ ಸಿನಿಮಾ ಮಾಡಿದ್ರೆ ಹಾಕಿದ ಬಂಡವಾಳ ವಾಪಸ್ ಬರಲ್ಲ ಎಂಬ ಮಾತುಗಳಿಗೆ ಕನ್ನಡದ ರಾಜು ಉತ್ತರ ಕೊಟ್ಟಿದ್ದಾನೆ. ಈಗಾಗಲೇ ರಿಲೀಸ್ ಆಗಿರುವ ಕನ್ನಡದ ಹಲವು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆಯುತ್ತಿವೆ. ದಾಖಲೆ ಬರೆಯುವುದರ ಜೊತೆಗೆ ಪರಭಾಷೆಯ ಫಿಲ್ಮ್ ಮೇಕರ್ಸ್ ಕನ್ನಡದತ್ತ ತಿರುಗಿ ನೋಡುವಂತೆ ಮಾಡುತ್ತಿವೆ.
ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ, ಗೋಧಿಬಣ್ಣ ಸಾಧಾರಣ ಮೈಕಟ್ಟು ಕನ್ನಡಿಗರನ್ನು ಮಾತ್ರವಲ್ಲ ತೆಲುಗು, ತಮಿಳು ಮೂವಿ ಮೇಕರ್ಸ್ ಮೆಚ್ಚುವಂತೆ ಮೂಡಿಬಂದಿತ್ತು. ಶುಕ್ರವಾರ ಭರ್ಜರಿ ಓಪನಿಂಗ್ ಪಡೆದುಕೊಂಡ ನರೇಶ್ ಸಾರಥ್ಯದ ರಾಜು ಕನ್ನಡ ಮೀಡಿಯಂ ಸಿನಿಮಾ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ರಾಜು ಕಥೆ ಸಕ್ಸಸ್ ಆಯ್ತು ಅನ್ನೋ ಖುಷಿಯಲ್ಲಿದ್ದ ಚಿತ್ರತಂಡಕ್ಕೆ ಮತ್ತೊಂದು ಬಂಪರ್ ಆಫರ್ ಸಿಕ್ಕಿದೆ. ಬಿಟೌನ್ನ ಅಮೀರ್ ಖಾನ್ ನಿರ್ಮಾಣ ಸಂಸ್ಥೆಯ ಸದಸ್ಯರು ರಾಜು ಕನ್ನಡ ಮೀಡಿಯಂ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
ಈಗಾಗಲೇ ಅಮೀರ್ ಖಾನ್ ಚಿತ್ರ ಸಂಸ್ಥೆ ಜೊತೆ ಒಂದು ಸುತ್ತಿನ ಮಾತುಕತೆ ಆಗಿದೆ ಎನ್ನಲಾಗಿದೆ. ಅಮೀರ್ ಆಪ್ತ ಸಲಹೆಗಾರ ವರುಣ್ ಓಕೆ ಮಾಡಿದ್ರೆ ರಾಜು ಬಾಲಿವುಡ್ಗೆ ಹಾರೋದು ಕನ್ಫರ್ಮ್ ಆಗಲಿದೆ. ಇನ್ನು ಕನ್ನಡದಲ್ಲಿ ಕಿಚ್ಚ ಸುದೀಪ್ ಮಾಡಿರೋ ಪಾತ್ರವನ್ನ ಅಮೀರ್ ಖಾನ್ ಮಾಡ್ತಾರೆ ಅನ್ನೋ ಸುಳಿವು ಕೂಡ ಸಿಕ್ಕಿದೆ.