ಚೆನ್ನೈ: ಈ ಬಾರಿಯ ಈಶ ಯೋಗ ಕೇಂದ್ರದಲ್ಲಿ ನಡೆಯುವ ಮಹಾಶಿವರಾತ್ರಿಗೆ ಮುಖ್ಯ ಅತಿಥಿಯಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಗಮಿಸಲಿದ್ದಾರೆ.
ಭಾನುವಾರ (ಫೆ.15) ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಈಶಾ ಯೋಗ ಕೇಂದ್ರದಲ್ಲಿ 33ನೇ ಮಹಾಶಿವರಾತ್ರಿ ಕಾರ್ಯಕ್ರಮ ನಡೆಯಲಿದ್ದು, ಸದ್ಗುರು ಅವರೊಂದಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಜೊತೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ಎಲ್ ಮುರುಗನ್ ಹಾಗೂ ಇತರ ಪ್ರಮುಖ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಇದೇ ಮೊದಲ ಬಾರಿಗೆ ಕಾರ್ಯಕ್ರಮದಲ್ಲಿ ಸದ್ಗುರು ಯೋಗೇಶ್ವರ ಲಿಂಗ ಮಹಾ ಅಭಿಷೇಕ ಕೈಗೊಳ್ಳಲಿದ್ದಾರೆ. ಬಳಿಕ ಸಂಗೀತ ಮತ್ತು ಧ್ಯಾನ ನಡೆಯಲಿದೆ. ನಂತರ ದೈವಿಕ ಸ್ತ್ರಿತತ್ವವನ್ನು ಆಚರಿಸುವ ಭವ್ಯ ಮೆರವಣಿಗೆ ಲಿಂಗ ಭೈರವಿ ಮಹಾಯಾತ್ರೆ ನಡೆಯಲಿದೆ. ಬಳಿಕ ಪ್ರಮುಖ ಆಕರ್ಷಣೆಯೆಂದರೆ ಆದಿಯೋಗಿ ದಿವ್ಯ ದರ್ಶನಂ. ಈ ವೇಳೆ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆಗೆ ಜೀವ ತುಂಬುವ ಬೆಳಕು ಮತ್ತು ಧ್ವನಿ ಪ್ರದರ್ಶನ ಇರಲಿದೆ.
ಈ ಕಾರ್ಯಕ್ರಮ 23 ಭಾಷೆಗಳಲ್ಲಿ 100ಕ್ಕೂ ಅಧಿಕ ಟಿವಿ ಚಾನೆಲ್ ಹಾಗೂ ಡಿಜಿಟಲ್ ಸ್ಟ್ರೀಮ್ ಆಗಲಿದ್ದು, ವಿಶ್ವಾದ್ಯಂತ 140 ಮಿಲಿಯನ್ ವೀಕ್ಷಕರು ನೋಡಬಹುದಾಗಿದೆ.

