ಚೆನ್ನೈ: ಮಗಳ ಮದುವೆಯ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತೈಗೈದ ಪ್ರಕರಣದಲ್ಲಿ ಜೀವಾವಾಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ಗೆ 30 ದಿನಗಳ ಪೆರೋಲ್ ಮಂಜೂರಾಗಿದ್ದು, ಜೈಲಿನಿಂದ ಬಿಡುಗಡೆಯಾಗಿದ್ದಾಳೆ.
ಕಳೆದ 28 ವರ್ಷದಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ನಳಿನಿ ಶ್ರೀಹರನ್ಗೆ ಇದೇ ಮೊದಲ ಬಾರಿಗೆ ಮದ್ರಾಸ್ ಹೈಕೋರ್ಟ್ ದೀರ್ಘ ಕಾಲದ ಪೆರೋಲ್ ನೀಡಿದೆ. ಮಗಳ ಮದುವೆಯ ಸಿದ್ಧತೆಗಾಗಿ 6 ತಿಂಗಳು ಪೆರೋಲ್ ನೀಡುವಂತೆ ನಳಿನಿ ಮನವಿ ಮಾಡಿದ್ದಳು. ಆದರೆ ಕೋರ್ಟ್ ಈ ಮನವಿಯನ್ನು ತಿರಸ್ಕರಿಸಿ ಜುಲೈ 5 ರಂದು ಕೋರ್ಟ್ ಒಂದು ತಿಂಗಳು ಮಾತ್ರ ಪೆರೋಲ್ ಮಂಜೂರು ಮಾಡಿದೆ.
ಪೆರೋಲ್ ಮಂಜೂರು ಮಾಡುವಾಗ, ಮಾಧ್ಯಮಗಳಿಗೆ ಸಂದರ್ಶನ ನೀಡಬಾರದು ಮತ್ತು ಯಾವುದೇ ಮಾಧ್ಯಮಗಳನ್ನು ಭೇಟಿ ಮಾಡಬಾರದು ಎಂದು ಕೋರ್ಟ್ ಷರತ್ತು ವಿಧಿಸಿದೆ.
28 ವರ್ಷದಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿಯನ್ನು ಇದೇ ಮೊದಲ ಬಾರಿಗೆ ದೀರ್ಘಾವದಿ ಪೆರೋಲ್ ಮೇಲೆ ಹೊರಗೆ ಕಳುಹಿಸಲಾಗಿದೆ. ಇದಕ್ಕೂ ಮೊದಲು 2016ರಲ್ಲಿ ಆಕೆಯ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೇವಲ 12 ಗಂಟೆಗಳ ಕಾಲ ಪೆರೋಲ್ ನೀಡಲಾಗಿತ್ತು.
ವೆಲ್ಲೂರು ಜೈಲಿನಿಂದ ಹೊರಬಂದ ನಳಿನಿಯನ್ನು ಆಕೆಯ ಸಂಬಂಧಿಕರು ಬಂದು ಕರೆದುಕೊಂಡು ಹೋಗಿದ್ದಾರೆ. ನಳಿನಿಯ ಮಗಳು ವೆಲ್ಲೂರಿನ ಜೈಲಿನಲ್ಲೇ ಹುಟ್ಟಿದ್ದು, ಆಕೆ ಇಂಗ್ಲೆಂಡಿನಲ್ಲಿ ಬೆಳೆದು ವೈದ್ಯಶಾಸ್ತ್ರ ಓದಿದ್ದಾಳೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿಯನ್ನು 1991 ರಲ್ಲಿ ಬಂಧಿಸಲಾಯಿತು. ಕೋರ್ಟ್ ಈಕೆಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದಾದ ನಂತರ ಮರಣದಂಡನೆ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಯಿತು. 1991 ಮೇ 21 ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ತಮಿಳುನಾಡಿನ ಶ್ರೀಪೆರಂಬದೂರು ಬಳಿ ಆತ್ಮಹುತಿ ಬಾಂಬ್ ದಾಳಿ ಮೂಲಕ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ 7 ಮಂದಿ ದೋಷಿಗಳು ಜೀವಾವಾದಿ ಶಿಕ್ಷೆ ಅನುಭವಿಸುತ್ತಿದ್ದಾರೆ.