ಚಿಕ್ಕಬಳ್ಳಾಪುರ: ಶಿಡ್ಲಘಟ್ಟ (Sidlaghatta) ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿ ರಾಜೀವ್ ಗೌಡ (Rajeev Gowda) ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ.
ಜಾಮೀನು ಅರ್ಜಿಯನ್ನು ಚಿಕ್ಕಬಳ್ಳಾಪುರ ಅಪರ ಎರಡನೇ ಜಿಲ್ಲಾ ಸತ್ರ ನ್ಯಾಯಾಲಯ ವಜಾಗೊಳಿಸಿದೆ. ಜ.14 ರಂದು ರಾಜೀವ್ ಗೌಡ ವಿರುದ್ಧ ಪ್ರಕರಣ ದಾಖಲಾಗಿತ್ತು. ಹತ್ತು ದಿನಗಳಿಂದಲೂ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದರು. ಈ ಬೆನ್ನಲ್ಲೇ ಕೆಪಿಸಿಸಿ ವತಿಯಿಂದ ರಾಜೀವ್ ಗೌಡ ಅಮಾನತು ಸಹ ಮಾಡಲಾಗಿತ್ತು. ಇದನ್ನೂ ಓದಿ: ನಗರಸಭೆ ಪೌರಾಯುಕ್ತೆಗೆ ಬೆದರಿಕೆ – ರಾಜೀವ್ ಗೌಡ ನಿವಾಸದ ಮೇಲೆ ಪೊಲೀಸರ ದಾಳಿ
ಪೊಲೀಸರಿಗೆ ಸವಾಲಾದ ರಾಜೀವ್ ಗೌಡ ಬಂಧನ
ರಾಜೀವ್ ಗೌಡ ಬಂಧನ ಭೀತಿಯಿಂದ ಪರಾರಿಯಾಗಿ 10 ದಿನಗಳೇ ಕಳೆದಿದ್ದು, ಚಿಕ್ಕಬಳ್ಳಾಪುರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ರಾಜೀವ್ ಗೌಡ ಬಂಧನಕ್ಕೆ ಪೊಲೀಸರು ಹಗಲು ರಾತ್ರಿ ಹುಡುಕಾಟ ಮುಂದುವರಿಸಿದ್ದು, ಕಳೆದ ರಾತ್ರಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದಿದ್ದ ಪೊಲೀಸರು, ಬೆಂಗಳೂರಿನ ಸಂಜಯ್ ನಗರದ ನಿವಾಸದ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ರಾಜೀವ್ ಗೌಡ ಪತ್ತೆಯಾಗಿಲ್ಲ.
ರಾಜೀವ್ ಗೌಡ ವಿದೇಶಕ್ಕೆ ಪರಾರಿಯಾಗದಂತೆ ಪಾಸ್ಪೋರ್ಟ್ ಮೇಲೂ ಸಹ ಪೊಲೀಸರು ಕಣ್ಣಿಟ್ಟಿದ್ದಾರೆ. ಇದರ ನಡುವೆ ಇಂದು ನ್ಯಾಯಾಲಯದಿಂದ ರಾಜೀವ್ ಗೌಡ ಜಾಮೀನು ಭವಿಷ್ಯ ಹೊರಬೀಳಲಿದ್ದು, ಏನಾಗಲಿದೆ ಎಂಬ ಕುತೂಹಲದಿಂದ ಎಲ್ಲರ ಚಿತ್ತ ನ್ಯಾಯಾಲಯದತ್ತ ನೆಟ್ಟಿದೆ. ಮತ್ತೊಂದೆಡೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಗೌಡಗೆ ಆ್ಯಸಿಡ್ ದಾಳಿ ಆಗಲಿದೆ ಎಂಬ ಬೆದರಿಕೆ ಪತ್ರವೂ ಅಂಚೆ ಮೂಲಕ ನಗರಸಭಾ ಕಚೇರಿಗೆ ಬಂದಿತ್ತು. ಈ ಪತ್ರವನ್ನ ಪಡೆದಿರುವ ಪೊಲೀಸರು ಈಗಾಗಲೇ ಎನ್ಸಿಆರ್ ಪ್ರಕರಣ ದಾಖಲಿಸಿದ್ದು, ನ್ಯಾಯಾಲಯದ ಅನುಮತಿ ಪಡೆದು ಎಫ್ಐಆರ್ ದಾಖಲಿಸಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ – ಕೆಪಿಸಿಸಿಯಿಂದ ರಾಜೀವ್ ಗೌಡ ಅಮಾನತು
ಆ್ಯಸಿಡ್ ದಾಳಿಯ ಮಾಹಿತಿಯ ಬೆದರಿಕೆ ಪತ್ರದಿಂದ ಎಚ್ಚೆತ್ತಿರುವ ಹಾಗೂ ಕೆಪಿಸಿಸಿ ವತಿಯಿಂದ ರಾಜೀವ್ ಗೌಡ ಅಮಾನತು ಆದ ಕಾರಣ ಅಮೃತಗೌಡ ಮೇಲೆ ದಾಳಿ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿಡ್ಲಘಟ್ಟ ನಗರಸಭಾ ಕಚೇರಿ ಸೇರಿದಂತೆ ಪೌರಾಯುಕ್ತೆ ನಿವಾಸದ ಬಳಿಯೂ ಪೊಲೀಸರ ಗಸ್ತು ಹೆಚ್ಚಿಸಲಾಗಿದೆ.

