ಜೈಪುರ: ಜೈಪುರದ ವಿವೇಕ್ ವಿಹಾರ್ ಪ್ರದೇಶದಲ್ಲಿರುವ ಲೋಕತಾಂತ್ರಿಕ ಪಕ್ಷದ (ಆರ್ಎಲ್ಪಿ) ಶಾಸಕ ನಾರಾಯಣ್ ಬೇನಿವಾಲ್ ಅವರ ಎಸ್ಯುವಿ ಕಾರನ್ನು ಅವರ ನಿವಾಸದ ಬಳಿಯೇ ಖದೀಮರು ಕದ್ದಿದ್ದಾರೆ.
ಶನಿವಾರ ರಾತ್ರಿ ನಾರಾಯಣ್ ಬೇನಿವಾಲ್ ಅವರು ತಮ್ಮ ಸ್ಕಾರ್ಪಿಯೋ ಕಾರನ್ನು ಕಟ್ಟಡದ ಹೊರಗೆ ನಿಲ್ಲಿಸಿದ್ದರು. ಆದರೆ ಇಂದು ಬೆಳಗ್ಗೆ ವಾಹನ ನಾಪತ್ತೆಯಾಗಿದೆ. ಇದೀಗ ವಿವೇಕ್ ವಿಹಾರ್ ಸಮೀಪದ ಪ್ರದೇಶಗಳಲ್ಲಿನ ಕಟ್ಟಡದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಎಸ್ಎಚ್ಒ ಶ್ಯಾಮ್ನಗರ ಶ್ರೀಮೋಹನ್ ಮೀನಾ ತಿಳಿಸಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿದ ಶಾಸಕ ನಾರಾಯಣ್ ಬೇನಿವಾಲ್ ಅವರು, ಪ್ರತಿ ದಿನದಂತೆ ಶನಿವಾರ ರಾತ್ರಿ ಅಪಾರ್ಟ್ಮೆಂಟ್ ಹೊರಗೆ ಕಾರನ್ನು ನಿಲ್ಲಿಸಿದ್ದೆ. ಆದರೆ ಇಂದು ಬೆಳಗ್ಗೆ ಎದ್ದು ನೋಡಿದಾಗ ವಾಹನ ನಾಪತ್ತೆಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಸ್ಸಾಂನಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ – ಹಂದಿ ಮಾಂಸ ಸೇವಿಸದಂತೆ ಸರ್ಕಾರ ಸೂಚನೆ
ಕಳ್ಳರಿಗೆ ಪೊಲೀಸರ ಭಯವಿಲ್ಲ. ಶಾಸಕರ ವಾಹನವನ್ನೇ ಹೀಗೆ ಕಳ್ಳತನ ಮಾಡಿರುವಾಗ ಜನ ಸಾಮಾನ್ಯರ ಸ್ಥಿತಿ ಏನಾಗಬಹುದು? ಪೊಲೀಸರು ಜನಸಾಮಾನ್ಯರನ್ನು ಅಡ್ಡಗಟ್ಟಿ ತಪಾಸಣೆ ನಡೆಸುತ್ತಾರೆ. ಆದರೆ ಕಳ್ಳರು ಮತ್ತು ದಂಗೆಕೋರರನ್ನು ಸ್ವಾತಂತ್ರ್ಯವಾಗಿ ಓಡಾಡಲು ಬಿಟ್ಟಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾರಾಯಣ್ ಬೇನಿವಾಲ್ ನಾಗೌರ್ ಸಂಸದ ಹನುಮಾನ್ ಬೇನಿವಾಲ್ ಅವರ ಸಹೋದರರಾಗಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ- ಆ್ಯಸಿಡ್ ಕುಡಿಸಿ ಕೊಲೆಗೆ ಯತ್ನ