ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ನೆಲೆಯಿಲ್ಲದೇ ಕಂಗಾಲಾಗಿದ್ದ ಕಾಂಗ್ರೆಸ್ ಪಂಚರಾಜ್ಯಗಳ ಚುನಾವಣೆ ಬಳಿಕ ಚೇತರಿಕೆ ಕಂಡಿದೆ. ಬಿಜೆಪಿ ಭದ್ರಕೋಟೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಡದಲ್ಲಿ ಗೆದ್ದು ಬೀಗಿದ ಕಾಂಗ್ರೆಸ್ ಪಕ್ಷದಲ್ಲೀಗ ಸಿಎಂ ಆಯ್ಕೆ ಬಗ್ಗೆ ಚರ್ಚೆ ನಡೆಯುತ್ತಿದೆ.
ಸಿಎಂ ಆಯ್ಕೆ ಕುರಿತು ನವದೆಹಲಿ ತುಘಲಕ್ ರಸ್ತೆಯ ಸೋನಿಯಾ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಭೆ ನಡೆಸಿತ್ತು. ಈ ಸಂಬಂಧ ಮಧ್ಯಪ್ರದೇಶದ ನೂತನ ಸಿಎಂ ಆಗಿ ಕಮಲ್ನಾಥ್ರನ್ನು ಅಧಿಕೃತವಾಗಿ ಆಯ್ಕೆ ಮಾಡಿ ಹೈಕಮಾಂಡ್ ಘೋಷಣೆ ಹೊರಡಿಸಿ ಹೊಸ ಯುಗ ಆರಂಭವಾಗಲಿ ಅಂತ ಶುಭಕೋರಿದೆ.
ಆದ್ರೆ ರಾಜಸ್ಥಾನ ಸಿಎಂ ಆಯ್ಕೆ ವಿಷಯದಲ್ಲಿ ಕಾಂಗ್ರೆಸ್ ನಾಯಕರಿಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವೆ ತೀವ್ರ ಪೈಪೋಟಿ ಇದ್ದು, ಮಧ್ಯರಾತ್ರಿ 12 ಗಂಟೆವರೆಗೆ ಸಭೆ ನಡೆಸಿದ್ರೂ ಅಂತಿಮವಾಗಿಲ್ಲ. ಉನ್ನತ ಮೂಲಗಳ ಪ್ರಕಾರ ಅಶೋಕ್ ಗೆಹ್ಲೋಟ್ ಅವರಿಗೆ ಸಿಎಂ ಪಟ್ಟ ನೀಡಲು ಸೋನಿಯಾ, ರಾಹುಲ್ ನಿರ್ಧರಿಸಿದ್ದಾರೆ. ಆದ್ರೆ ಸಚಿನ್ ಪೈಲಟ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಜೈಪುರದಲ್ಲಿ ಸಚಿನ್ ಪೈಲಟ್ ಪರವಾಗಿ ಪ್ರತಿಭಟನೆಗಳು ಜೋರಾಗಿದ್ದು, ರಾಹುಲ್ ಗಾಂಧಿ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಛತ್ತೀಸ್ಗಡ ಸಿಎಂ ಆಯ್ಕೆ ಸಂಬಂಧ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಬಘೇಲಾ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಟಿ.ಎಸ್. ಸಿಂಗ್ದೇವ್, ಚರಣ್ ದಾಸ್ ಮಹಾಂತ್ಗೆ ರಾಹುಲ್ ಗಾಂಧಿ ಬುಲಾವ್ ನೀಡಿದ್ದಾರೆ. ಮೂವರು ನಾಯಕರ ಜೊತೆ ರಾಹುಲ್ ಗಾಂಧಿ ಸಭೆ ನಡೆಸಲಿದ್ದು ಇಂದು ಬಹುತೇಕ ಎರಡು ರಾಜ್ಯಗಳಿಗೆ ಸಿಎಂ ಆಯ್ಕೆ ಆಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv