ಬೀದರ್: ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ಸತತ ಮಳೆ ಹಿನ್ನೆಲೆಯಲ್ಲಿ ಮಾಂಜ್ರಾ ನದಿ ದಡದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮಹಾರಾಷ್ಟ್ರದ ಧನ್ನೆಗಾಂವ್ ಜಲಾಶಯದಿಂದ ನಾಲ್ಕು ಗೇಟ್ ಮೂಲಕ ಬಾರಿ ಪ್ರಮಾಣದ ನೀರು ಮಾಂಜ್ರಾನದಿಗೆ ನೀರು ಬಿಡಲಾಗುತ್ತಿದೆ.
ಧನ್ನೆಗಾಂವ್ ಜಲಾಶಯದ ಜೊತೆಗೆ ಕಾರಂಜಾ ಜಲಾಶಯದಿಂದಲ್ಲೂ 5,050 ಕ್ಯೂಸೆಕ್ ನೀರು ಬಿಡುಗಡೆಯಾದ ಪರಿಣಾಮ ಮಾಂಜ್ರಾನದಿ ದಡದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಭಾಲ್ಕಿ ತಾಲೂಕಿನ ಮಾಂಜ್ರಾನದಿ ದಡದಲ್ಲಿ ಸಾಯಿಗಾಂವ್, ಜೀರಗ್ಯಾಳ, ಕಾಸರ್ತೂಗಾಂವ್, ಲಖನ್ ಗಾಂವ್, ಸಂಗಮ್ ಸೇರಿದಂತೆ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಆತಂಕ ಮನೆಮಾಡಿದ್ದು, ಎರಡು ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆಯಾದ ಪರಿಣಾಮ ಸಾಯಿಗಾಂವ್ ಗ್ರಾಮದ ಸೇತುವೆ ಮೇಲಿಂದ ನೀರು ಹರಿಯುತ್ತಿದ್ದು ಮಾಂಜ್ರಾನದಿ ದಡದಲ್ಲಿರುವ ಜಮೀನುಗಳಿಗೆ ನೀರು ನುಗ್ಗಿ ನೂರಾರು ಎಕರೆಯಲ್ಲಿ ಬೆಳೆದಿದ್ದ ಸೋಯಾ, ಉದ್ದು, ಹೆಸರು, ತೊಗರಿ ಬೆಳೆಗಳು ಹಾನಿಯಾಗಿದೆ. ಇದನ್ನೂ ಓದಿ: ನಾಳೆಯ ಭಾರತ್ ಬಂದ್ಗೆ ಸ್ತಬ್ದವಾಗುತ್ತಾ ಕರುನಾಡು? – ಎಂದಿನಂತೆ ಇರಲಿದೆ KSRTC ಸೇವೆ
ಜಲಾಶಯದಿಂದ ಹೆಚ್ಚಿನ ಪ್ರಮಾಣದಿಂದ ಮಾಂಜ್ರಾನದಿಗೆ ನೀರು ಹರಿದು ಬರುತ್ತಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೂಡಾ ಸತತವಾಗಿ ಮಳೆಯಾಗುತ್ತಿದೆ. ಹೀಗಾಗಿ ನಾವು ಬೆಳೆದ ವಿವಿಧ ಬೆಳೆಗಳು ಹಾನಿಯಾಗಿದೆ. ನಮ್ಮ ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ಅಧಿಕಾರಿಗಳು, ಜನಪ್ರತಿನಿಧಿಗಳು ಯಾರು ಸ್ಥಳಕ್ಕೆ ಭೇಟಿ ನೀಡುವ ಕಲಸ ಮಾಡುತ್ತಿಲ್ಲ, ಆದಷ್ಟು ಬೇಗ ಭೇಟಿ ನೀಡಿ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತ್ ಬಂದ್ ದಿನ ಕರ್ನಾಟಕ ಬಂದ್ಗೆ ಕರೆ ಕೊಟ್ಟ ರೈತರು- ಯಾರ ಬೆಂಬಲವಿದೆ, ಯಾರದ್ದು ಇಲ್ಲ..?