ಬೆಂಗಳೂರು: ಶುಕ್ರವಾರ ಸಂಜೆ ರಾಜ್ಯದ ಹಲವೆಡೆ ಭಾರೀ ಗಾಳಿ ಸಹಿತ ಮಳೆಯಾಗಿದ್ದು, ರೈತರು ಬರಗಾಲದಲ್ಲಿ ಸಾಕಷ್ಟು ಖರ್ಚು ಮಾಡಿ ಬೆಳೆದಿದ್ದ ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ.
ಧಾರವಾಡದ ಕವಲಗೇರಿ ಹಾಗೂ ಚಂದನಮಟ್ಟಿ ಗ್ರಾಮದ ರೈತರು ಬರದ ನಡುವೆಯೂ ಬೋರ್ವೆಲ್, ಟ್ಯಾಂಕರ್ ಮೂಲಕ ನೀರು ಹಾಯಿಸಿಕೊಂಡು ಒಂದಿಷ್ಟು ಬೆಳೆ ಬೆಳೆದಿದ್ರು. ಉತ್ತಮವಾಗಿ ಮಳೆಯಾಗಿದ್ರಿಂದ ಬೆಳೆ ಚೆನ್ನಾಗಿ ಬಂದಿತ್ತು. ಆದ್ರೆ ಕಳೆದೆರೆಡು ದಿನಗಳಿಂದ ಸುರಿಯುತ್ತಿರೋ ಗಾಳಿ ಸಹಿತ ಭಾರೀ ಮಳೆಗೆ ಕಟಾವಿಗೆ ತಯಾರಾಗಿದ್ದ ಬಾಳೆ ಫಸಲು ಸಂಪೂರ್ಣ ನಾಶವಾಗಿವೆ.
ಗದಗದ ಚಿಂಚಲಿ ಗ್ರಾಮದಲ್ಲಿ ಸಿಡಿಲು ಬಡಿದು ಕಾಳಪ್ಪ ಬೆನಕನಹಳ್ಳಿ ಎಂಬವರಿಗೆ ಸೇರಿದ ಎತ್ತು ಸಾವನ್ನಪ್ಪಿದೆ. ನೀಲಗುಂದ ಗ್ರಾಮದಲ್ಲಿ ಬಿರುಗಾಳಿಗೆ ಮನೆ ಹಾಗೂ ಗುದ್ನೇಶ್ವರ ಮಠದ ಸಭಾ ಭವನದ ಮೇಲ್ಛಾವಣಿ ಹಾರಿಹೋಗಿವೆ. ಗಿಡಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಮುಳವಳ್ಳಿ ಗ್ರಾಮದಲ್ಲಿ ಮೋಡಕವಿದ ವಾತಾವರಣವಿದ್ದು, ಬಿರುಸಿನ ಗಾಳಿಗೆ 10ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣೆಗಳು ಹಾರಿಹೋಗಿವೆ. ಇನ್ನು ಬಿರುಗಾಳಿಯ ರಭಸಕ್ಕೆ ಮಂಜುನಾಥ್ ಎಂಬವರ ಕೋಳಿ ಫಾರಂ ಸಂಪೂರ್ಣ ನಾಶವಾಗಿದ್ದು ನೂರಾರು ಕೋಳಿಗಳು ಸಾವನ್ನಪ್ಪಿವೆ. ಇದಲ್ಲದೇ ಮಾವಿನ ತೋಟ, ಬಾಳೆ ತೋಟಗಳಿಗೂ ಹಾನಿಯಾಗಿದ್ದು ವಿದ್ಯುತ್ ತಂತಿಗಳು ನೆಲಕ್ಕುರುಳಿವೆ.