ಹಾಸನ: ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ತತ್ತರಿಸಿದ್ದ ಜನಕ್ಕೆ ವರುಣದೇವ ಕೃಪೆ ಮಾಡಿದ್ದು, ಜಿಲ್ಲೆಯಾದ್ಯಂತ ವರುಣನ ಆರ್ಭಟ ತಗ್ಗಿದೆ.
ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಸದ್ಯ ವರುಣದೇವ ತಾತ್ಕಾಲಿಕ ಬಿಡುವು ನೀಡಿದ್ದಾನೆ. ಜಿಲ್ಲೆಯ ಬಹುತೇಕ ಕಡೆ ಕೇವಲ ಮೋಡ ಕವಿದ ವಾತಾವರಣವಿದೆ. ಆದರೂ ಮಲೆನಾಡಿನ ಕೆಲವು ಭಾಗದಲ್ಲಿ ಬಿಟ್ಟು ಬಿಟ್ಟು ಜಿಟಿ ಜಿಟಿ ಮಳೆ ಸುರಿಯುತ್ತಿದೆ.
ಮಳೆ ಕಡಿಮೆಯಾದರೂ ಸಹ ಹಲವು ಕಡೆ ಭೂಕುಸಿತ ಉಂಟಾಗಿದ್ದು, ಸಕಲೇಶಪುರ ತಾಲೂಕಿನ ಹೆತ್ತೂರು, ಮಾಗೇರಿ, ಹಿಜ್ಜನಹಳ್ಳಿ ಹಾಗೂ ಬಿಸಲೆ ಬಳಿ ಭಾರಿ ಭೂಕುಸಿತವಾಗಿದೆ. ಇದರಿಂದಾಗಿ ರಸ್ತೆಗಳು ಬಿರುಕುಬಿಟ್ಟು ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ನೆರೆಪೀಡಿತ ರಾಮನಾಥಪುರ ಗ್ರಾಮವು ಸಹಜ ಸ್ಥಿತಿಗೆ ಮರಳುತ್ತಿದ್ದು, ಗ್ರಾಮದಲ್ಲಿ ವಾಹನಗಳ ಸಂಚಾರ ಪ್ರಾರಂಭವಾಗಿದೆ.
ಹಾರಂಗಿ ಜಲಾಶಯದಿಂದ ಹೊರ ಹರಿವಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಸೃಷ್ಟಿಯಾಗಿದ್ದ ಪ್ರವಾಹ ಪರಿಸ್ಥಿತಿ ಸಂಪೂರ್ಣವಾಗಿ ತಗ್ಗಿದೆ. ಅಲ್ಲದೇ ಜಲಾಶಯಕ್ಕೆ ಒಳಹರಿವಿನ ಪ್ರಮಾಣವು ಸಹ ಕಡಿಮೆಯಾಗಿದೆ. ಸೋಮವಾರ ಜಲಾಶಯಕ್ಕೆ 16,551 ಕ್ಯೂಸೆಕ್ ಒಳಹರಿವಿದ್ದು, 21,850 ಕ್ಯೂಸೆಕ್ ಹೊರಗೆ ಬಿಡಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv