– ಹೆಚ್ಎಸ್ಆರ್ ಲೇಔಟ್ ರಸ್ತೆಯಲ್ಲಿ ಮೂರಡಿ ನೀರು
– ಸಿಟಿ ಮಾರ್ಕೆಟ್ ಅಂಗಡಿಗಳಿಗೆ ನುಗ್ಗಿದ ನೀರು
ಬೆಂಗಳೂರು: ಒಂದು ಗಂಟೆ ಕಾಲ ಸುರಿದ ಮಳೆಗೆ ಬೆಂಗಳೂರು ತತ್ತರಿಸಿದ್ದು, ಸಂಜೆ ಸುರಿದ ಭಾರೀ ಮಳೆಗೆ ಹಲವು ಪ್ರದೇಶಗಳು ಜಲಾವೃತಗೊಂಡಿದೆ.
ನಗರದ ಹೆಚ್ಎಸ್ಆರ್ ಲೇಔಟ್, ಮೆಜೆಸ್ಟಿಕ್, ರಾಜಾಜಿನಗರ, ಕೋರಮಂಗಲ, ಪೀಣ್ಯ, ಲಗ್ಗೆರೆ, ಕಾಮಾಕ್ಷಿ ಪಾಳ್ಯ, ಜಯನಗರ, ಜೆಪಿ ನಗರ, ಯಶವಂತಪುರ, ಹೆಬ್ಬಾಳ, ಕೆಂಗೇರಿ, ಮೈಸೂರು ರಸ್ತೆ ಸೇರಿದಂತೆ ನಗರದೆಲ್ಲೆಡೆ ಭಾರೀ ಮಳೆ ಸುರಿಯಿತು. ಸಂಜೆ ಐದು ಗಂಟೆಗೆ ಆರಂಭವಾದ ಮಳೆ ಒಂದು ತಾಸಿಗೂ ಹೆಚ್ಚು ಕಾಲ ಸುರಿದ ಪರಿಣಾಮ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಮಂದಿ ಪರದಾಡಿದರು.
ಮಳೆಗೆ ಚಾಮರಾಜಪೇಟೆಯ ಉಮಾ ಥಿಯೇಟರ್ ರಸ್ತೆಯಲ್ಲಿ ಮರವೊಂದು ಉರುಳಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಕುರಿತು ಮಾಹಿತಿ ಪಡೆದು ಕೂಡಲೇ ಕಾರ್ಯಪ್ರವೃತ್ತರಾದ ಬಿಬಿಎಂಪಿ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ನಡೆಸಿದರು. ಇನ್ನು ಸಿಟಿ ಮಾರ್ಕೆಟ್ನ ಕೆಲಸ ಅಂಗಡಿಗಳಿಗೆ ನೀರು ನುಗ್ಗಿದ್ದು, ಹೆಚ್ಎಸ್ಆರ್ ಲೇಔಟ್ನಲ್ಲಿ ಚರಂಡಿ ಒಳಗಿಂದ ನೀರು ಬುಗ್ಗೆಯಂತೆ ಹೊರಬಂದಿದೆ. ರಸ್ತೆಗಳಲ್ಲಿ ಮೂರ್ನಾಲ್ಕು ಅಡಿವರೆಗೂ ನೀರು ನಿಂತಿತ್ತು. ಬಹುತೇಕ ಕಡೆ ಟ್ರಾಫಿಕ್ ಜಾಮ್ ಆಗಿತ್ತು.
ಇಂದು ನಗರದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಸಿಂಗಸಂದ್ರದಲ್ಲಿ 70 ಮಿಲಿಮೀಟರ್ ಮಳೆ ಆಗಿದ್ದು, ದಯಾನಂದನಗರದಲ್ಲಿ 54 ಮಿಲಿ ಮೀಟರ್, ಹೆಚ್ಎಸ್ಆರ್ ಲೇಔಟ್ನಲ್ಲಿ 50 ಮಿಲಿಮೀಟರ್ ಮಳೆ ಆಗಿದ್ದು, ಇನ್ನೂ ಮೂರ್ನಾಲ್ಕು ದಿನ ನಗರದಲ್ಲಿ ಮಳೆ ಅಬ್ಬರಿಸುವ ಸಾಧ್ಯತೆ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv