ಬೆಂಗಳೂರು: ರಾಜ್ಯದ ಹಲವೆಡೆ ಮಳೆ (Rain) ಆರ್ಭಟ ಮುಂದುವರಿದಿದೆ. ನಾಳೆ, ನಾಡಿದ್ದು ಬೆಂಗಳೂರು ಸೇರಿ ರಾಜ್ಯಾದ್ಯಂತ ಗುಡುಗು – ಮಿಂಚು ಸಹಿತ ಭಾರೀ ಮಳೆ ಸಾಧ್ಯತೆ ಇದ್ದು ಅಲರ್ಟ್ ಘೋಷಿಸಲಾಗಿದೆ.
ಇಂದು ರಾಜ್ಯದ ಹಲವೆಡೆ ಮಳೆ ಅವಾಂತರ ಸೃಷ್ಟಿಸಿದೆ. ಮಂಡ್ಯದ ಬೂದನೂರು ಕೆರೆ ಒಡೆದು ಬೆಂಗಳೂರು-ಮೈಸೂರು ಹೆದ್ದಾರಿಗೆ ನೀರು ನುಗ್ಗಿ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ. ಬೆಂಗಳೂರು-ಮೈಸೂರು (Bengaluru-Mysuru) ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಇಂಡವಾಳು ಸಮೀಪವೂ ಹೆದ್ದಾರಿ ಜಲಾವೃತವಾಗಿದೆ. ಲೋಕಪಾವನಿ ನದಿ ಉಕ್ಕಿ ಹರಿದಿದ್ದು, ಚಂದಗಿರಿ ಕೊಪ್ಪಲು, ಸಬ್ಬನಕುಪ್ಪೆ ಗ್ರಾಮಗಳು ಜಲಾವೃತವಾಗಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ಬಂದಿದ್ದ ಕೈ ನಾಯಕನಿಗೆ ಹೃದಯಾಘಾತ!
ಪಾಂಡವಪುರದ ತಣ್ಣೂರು ಕೆರೆ ಭರ್ತಿಯಾಗಿ ಗ್ರಾಮದ ಪ್ರಾಥಮಿಕ ಕೇಂದ್ರಕ್ಕೆ ನದಿಯಂತೆ ನೀರು ನುಗ್ಗಿದೆ. ಮೈಸೂರಿನ ಟಿ.ನರಸೀಪುರ ತಾಲೂಕಿನ ಯಾಚೇನಹಳ್ಳಿ ಗ್ರಾಮದ ಬಳಿ ವಿಶ್ವೇಶ್ವರಯ್ಯ ನಾಲೆ ಒಡೆದು, 150 ಎಕರೆಯಷ್ಟು ಭತ್ತದ ಬೆಳೆ ಸಂಪೂರ್ಣ ಜಲಾವೃತವಾಗಿದೆ. ಜೆಸಿಬಿ (JCB) ಮೂಲಕ ಮುಚ್ಚಲು ಹರಸಾಹಸ ಪಡಲಾಯಿತು. ಚಾಮರಾಜನಗರದಲ್ಲಿ ಸುವರ್ಣಾವತಿ, ಚಿಕ್ಕಹೊಳೆ ಡ್ಯಾಮ್ನಿಂದ ಭಾರೀ ನೀರು ಬಿಟ್ಟ ಕಾರಣ ಯಳಂದೂರು ತಾಲೂಕಿನ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಮಲೆಮಹದೇಶ್ವರದ ಬೆಟ್ಟದ ಸುತ್ತಲ ಹಳ್ಳಿಗಳಲ್ಲೂ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ತುಮಕೂರಿನಲ್ಲಿ ಮಳೆಯಿಂದಾಗಿ ಗುಬ್ಬಿ, ಕೊರಟಗೆರೆ, ಮಧುಗಿರಿಯಲ್ಲಿ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ರಾಮನಗರದ ಮಂಚನಬೆಲೆ ಜಲಾಶಯ (Manchanabele Dam) ದಿಂದ 6 ಸಾವಿರ ಕ್ಯೂಸೆಕ್ ನೀರು ರಿಲೀಸ್ ಹೊರಕ್ಕೆ ಬಿಡಲಾಗಿದೆ. ಚಿಕ್ಕಬಳ್ಳಾಪುರ ಗೌರಿಬಿದನೂರು ಬಳಿ ಕುಮದ್ವತಿ ನದಿ ಮೈದುಂಬಿ ಹರಿದಿದ್ದು ಇಡಗೂರು-ಜಾಲಹಳ್ಳಿ ಮಧ್ಯೆ ನದಿ ಪಾತ್ರದಲ್ಲಿ ಬೈಕ್ ಸಮೇತ ಸವಾರರಿಬ್ಬರು ಕೊಚ್ಚಿಹೋಗಿದ್ರು. ಪ್ರಶಾಂತ್ ಎಂಬಾತನ ರಕ್ಷಣೆ ಮಾಡಲಾಗಿದ್ದು, ಮತ್ತೋರ್ವ ಸವಾರನ ಶವ ಪತ್ತೆಯಾಗಿದೆ.