ಬೆಂಗಳೂರು: ರಾಜ್ಯದಲ್ಲಿ ಮುಂದಿನ 5 ದಿನ ರಾಜ್ಯದ ದಕ್ಷಿಣ, ಉತ್ತರ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಂಭವ ಇದೆ.
ಕರಾವಳಿ ಭಾಗದಲ್ಲಿ ನಾಳೆ ಯೆಲ್ಲೋ ಅಲರ್ಟ್, 3 ಹಾಗೂ 4ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನ ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಿಗೆ ನಾಳೆ ಯೆಲ್ಲೋ ಅಲರ್ಟ್, ಕಲಬುರಗಿ, ವಿಜಯಪುರದಲ್ಲಿ ನಾಳೆ, ನಾಡಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದು ಬೆಂಗಳೂರು, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ರಾಮನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ನಿನ್ನೆಯೂ ಬೆಂಗಳೂರಿನಲ್ಲಿ ಕೆಲವೆಡೆ ಸಾಧಾರಣ ಮಳೆ ಆಗಿದ್ದು, ಮೊನ್ನೆ ರಾತ್ರಿ ಬರೀ ಒಂದೂವರೆ ಗಂಟೆಯಲ್ಲಿ 66.8 ಮಿಲಿಮೀಟರ್ ಮಳೆ ಆಗಿದೆ. ಬೀದರ್ನ ಕಮಲಾನಗರ ತಾಲೂಕಿನಲ್ಲಿ ಮಳೆ ಅಬ್ಬರ ಜೋರಾಗಿದೆ. ಬಸವಕಲ್ಯಾಣ, ಹುಮ್ನಾಬಾದ್, ಭಾಲ್ಕಿ ಸೇರಿ ಹಲವೆಡೆ ಮಳೆ ಆಗಿದೆ. ಇಂದು ಸಹ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಭಾರೀ ಮಳೆಗೆ ಚೇಳೂರು ಬಳಿ ಪಾಪಾಘ್ನಿ ನದಿ ತುಂಬಿ ಹರಿಯುತ್ತಿದೆ. ಇದನ್ನೂ ಓದಿ: ತೆಲುಗು ಧಾರಾವಾಹಿ ಶೂಟಿಂಗ್ ಸೆಟ್ನಲ್ಲಿ ಕನ್ನಡದ ನಟ ಚಂದನ್ಗೆ ಕಪಾಳ ಮೋಕ್ಷ..!
ಬಾಗೇಪಲ್ಲಿ ಬಳಿಯ ಚಿತ್ರಾವತಿ ಜಲಾಶಯ, ಭೋಯಿನಹಳ್ಳಿ ಗ್ರಾಮದ ಲಕ್ಷ್ಮೀ ಸಾಗರ ಕೆರೆ ಕೋಡಿ ಬಿದ್ದಿದೆ. ಇದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಟೊಮೊಟೋ, ಹೂಕೋಸು ನೀರು ಪಾಲಾಗಿದೆ. ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಪುಟ್ಟ-ಪುಟ್ಟ ಜಲಪಾತಗಳು ಸೃಷ್ಟಿಯಾಗಿವೆ. ದಾವಣಗೆರೆಯ ಚನ್ನಗಿರಿ ಭಾಗದಲ್ಲಿ ಮಳೆ ಆಗ್ತಿದ್ದು, ಗೊಲ್ಲರಹಳ್ಳಿ ಗ್ರಾಮದಲ್ಲಿ ಬಿರುಕು ಬಿಟ್ಟಿದ್ದ ಶಾಲಾ ಕಟ್ಟಡ ಕುಸಿದು ಬಿದ್ದಿದೆ. ಭಾನುವಾರವಾದ್ದರಿಂದ ಅಪಾಯ ತಪ್ಪಿದೆ.