ಚಾಮರಾಜನಗರ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿ, ಪೂರ್ವ ಮುಂಗಾರಿಗೆ ಮುನ್ನುಡಿ ಬರೆದಿದೆ. ಹಲವು ಜಿಲ್ಲೆಗಳಲ್ಲಿ ವರುಣನ ಆಗಮನದಿಂದ ಅವಾಂತರ ಸೃಷ್ಟಿಯಗಿದೆ. ಹಾಸನದಲ್ಲಿ ಭಾರೀ ಮಳೆಯಾಗಿದ್ದು, ಚನ್ನರಾಯಪಟ್ಟಣ, ದಿಂಡಗೂರು ಗ್ರಾಮ ಸೇರಿದಂತೆ ಹಲವೆಡೆ ಗುಡುಗು, ಸಹಿತ ಮಳೆಯಾಗಿತ್ತು.
ಭಾರೀ ಗಾಳಿಮಳೆಗೆ ಬೃಹತ್ ಮರ ರಸ್ತೆಗೆ ಉರುಳಿ ಬಿದ್ದಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಬಸವನಪುರ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಯುವಕರ ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಗುಡುಗು, ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ತಾಲೂಕಿನ ಗೂಳಿಪುರ ಎಂಬಲ್ಲಿ ಸಿಡಿಲು ಬಡಿದು ಹಸು ಸಾವನ್ನಪ್ಪಿದೆ.
ಭಾರೀ ಮಳೆಯಿಂದಾಗಿ ಜಿಲ್ಲಾಡಳಿತ ಭವನದ ರಸ್ತೆಯಲ್ಲಿ ಕೊಳಚೆ ನೀರು ಹರಿದು ಕೆರೆಯಂತಾಗಿತ್ತು. ಇನ್ನು ಮಂಡ್ಯದಲ್ಲೂ ಧಾರಾಕಾರ ಮಳೆಯಾಗಿದ್ದು, ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡುವಂತಾಯ್ತು. ತುಮಕೂರಿನ ಜಿಲ್ಲೆಯ ತುಮಕೂರು, ತಿಪಟೂರು, ಗುಬ್ಬಿ ತಾಲೂಕಿನೆಲ್ಲೆಡೆ ಮಳೆರಾಯ ಅಬ್ಬರಿಸಿದ್ದಾನೆ. ಕೆಲ ಮನೆಗಳಿಗೆ ನೀರು ತುಂಬಿತ್ತು. ಇದನ್ನೂ ಓದಿ: ಸಂತೋಷ್ ಅಂತ್ಯಕ್ರಿಯೆ ವಿಚಾರದಲ್ಲಿ ಸಂಬಂಧಿಕರಿಂದಲೇ ಹೈಡ್ರಾಮಾ
ಹಲವೆಡೆ ಮರಗಳು ಧರೆಗುರುಳಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಕೊಡಗಿನಲ್ಲೂ ವರುಣಾನಾರ್ಭಟ ಜೋರಾಗಿತ್ತು. ಮಡಿಕೇರಿ, ಕುಶಾಲನಗರ, ನಾಪೋಕ್ಲು, ಸುಂಟಿಕೊಪ್ಪ ಸೇರಿದಂತೆ ಹಲವೆಡೆ ಮಳೆಯಾಗಿದೆ. ಮಂಗಳೂರಿನಲ್ಲೂ ಗುಡುಗು ಸಿಡಿಲು ಸಹಿತ ಗಾಳಿ ಮಳೆಯಾಗಿದೆ. ಕಡಬ, ಪುತ್ತೂರು ತಾಲೂಕು ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು, ಕೃಷಿ ಬೆಳೆಗಳಿಗೆ ಹಾನಿಯುಂಟಾಗಿದೆ. ಇದನ್ನೂ ಓದಿ: ಔಷಧಿ ಘಟಕದಲ್ಲಿ ಅಗ್ನಿ ದುರಂತ: 6 ಮಂದಿ ಸಾವು