ಬೆಂಗಳೂರು: ಮಂಗಳವಾರ ರಾತ್ರಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಳೆ ಬಂದಿದ್ದರಿಂದ ವಾಹನ ಸವಾರರು ಪರದಾಡಿದರು. ರಾಮನಗರದಲ್ಲೂ ಭಾರಿ ಮಳೆಯಾಗಿದ್ದು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಡುವಂತಾಯಿತು.
ಮೈಸೂರಿನಲ್ಲೂ ಮಳೆಯಾಗಿದ್ದು, ನಗರದ ಹೊರವಲಯದ ಕೆಂಪಯ್ಯನಹುಂಡಿಯಲ್ಲಿ ಸಿಡಲು ಬಡಿದು ನಾಡನಹಳ್ಳಿ ಗ್ರಾಮದ ನಿವಾಸಿ ನಾಗರಾಜು (42) ಎಂಬವರು ಸಾವನ್ನಪ್ಪಿದ್ದಾರೆ. ಕೆಂಪಯ್ಯನಹುಂಡಿಗೆ ಕೂಲಿ ಕೆಲಸಕ್ಕೆ ನಾಗರಾಜು ಬಂದಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ಪಿ.ಗಂಗಾಪುರದಲ್ಲಿ ಒನಮ್ಮ ಎಂಬುವರಿಗೆ ಸೇರಿದ ಸೀಮೆಹಸುವೊಂದು ಸಿಡಿಲು ಬಡಿತಕ್ಕೆ ಸಿಲುಕಿ ಸಾವನ್ನಪ್ಪಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹಿತ್ತಲಪುರಗ್ರಾಮದಲ್ಲಿ ಗ್ರಾಮದ ನಂಜುಂಡಯ್ಯ ಎಂಬುವರಿಗೆ ಸೇರಿದ ಹಸು ಸಾವನ್ನಪ್ಪಿದೆ. ಈ ವೇಳೆ ಅದೃಷ್ಟವಶಾತ್ ಸ್ಥಳದಲ್ಲಿದ್ದ ನಂಜುಡಯ್ಯ ಪಾರಾಗಿದ್ದಾರೆ.