ಬೆಂಗಳೂರು: ರಾಜ್ಯದಲ್ಲಿ ವರುಣ (Rain in Karnataka) ಅವಾಂತರ ಹೆಚ್ಚಾಗಿದೆ. ಸೋಮವಾರ ಸುರಿದ ಗುಡುಗು, ಸಿಡಿಲು ಜೊತೆಗಿನ ಬಿರುಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಸಾವು ನೋವು ಕೂಡ ಸಂಭವಿಸಿದೆ.
ವಿಜಯಪುರ (Vijayapura) ಜಿಲ್ಲೆಯ ನಿಡಗುಂದಿ ತಾಲೂಕಿನ ಕಿರಿಶ್ಯಾಳ ಗ್ರಾಮದಲ್ಲಿ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ದ್ಯಾಮಣ್ಣ ಎಂಬವರು ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ದೇವರ ಹಿಪ್ಪರಗಿ ತಾಲೂಕಿನ ಸಲಾದಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ 20ಕ್ಕೂ ಹೆಚ್ಚು ಕುರಿಗಳು ಮೇಕೆಗಳು ಸಾವನ್ನಪ್ಪಿವೆ. ಅತ್ತ ಗಣಿನಾಡು ಬಳ್ಳಾರಿಯ ಗ್ರಾಮೀಣ ಭಾಗದಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಯಾಲ್ಪಿ ಕುಂತ್ನಾಳ ಗ್ರಾಮದಲ್ಲಿ ರೈತ ಪಂಪಾಪತಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಶಿವಮೊಗ್ಗ (Shivamogga) ದಲ್ಲಿ ನಿನ್ನೆ ಸಂಜೆ ಗಾಳಿ ಮಳೆಗೆ ಹಲವು ಅವಾಂತರ ಸೃಷ್ಟಿಯಾಗಿದೆ. ಶಿವಮೊಗ್ಗ ವಿನೋಬನಗರದ ಆಶ್ರಯ ಬಡಾವಣೆ ನಿವಾಸಿ ಲಕ್ಷ್ಮಿಬಾಯಿ ಕುರಿಗಳಿಗೆ ಮೇವು ತರಲು ಹೋಗಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಶಿವಮೊಗ್ಗದ ದುರ್ಗಿಗುಡಿ ಬಡಾವಣೆಯಲ್ಲಿ ಭಾರೀ ಗಾಳಿಗೆ ತೆಂಗಿನ ಮರವೊಂದು ಬಿದ್ದು ಎರಡು ಕಾರುಗಳು ಜಖಂಗೊಂಡಿವೆ. ಸೋಮಿನಕೊಪ್ಪ ಬಡಾವಣೆಯಲ್ಲಿ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಅಲ್ಲದೇ ವಿನೋಬನಗರದ ರಾಜಕಾಲುವೆಯಲ್ಲಿ ಸಿಲುಕಿದ್ದ ಎಮ್ಮೆಯನ್ನು ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಗಾಣಗಾಪುರ ದತ್ತಾತ್ರೇಯನ ಸನ್ನಿಧಿಯಲ್ಲಿ ಪುಡಿರೌಡಿ ಅಟ್ಟಹಾಸ – ಭಕ್ತರ ತಲೆ ಮೇಲೆ ಕಾಲಿಟ್ಟು ದೌರ್ಜನ್ಯ
ಹಾಸನ ಜಿಲ್ಲೆಯ ವಿವಿಧೆಡೆ ವರುಣನ ಅಬ್ಬರ ಅವಾಂತರ ಸೃಷ್ಟಿಸಿದೆ. ಮಂಡ್ಯದ ಕೆಆರ್ಎಸ್ ಬೃಂದಾವನದಲ್ಲಿ ಮರಗಳು ಉರುಳಿಬಿದ್ದಿದ್ದು ಅಂಗಡಿಗಳು ಹಾಗೂ ತಡೆಗೋಡೆಗಳಿಗೆ ಹಾನಿಯುಂಟಾಗಿದೆ. ಪ್ರವಾಸಿಗರ ಸಂಖ್ಯೆ ಕಡಿಮೆ ಇದ್ದಿದ್ರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಮೈಸೂರಿನಲ್ಲೂ ಭಾರೀ ಮಳೆಗೆ ಅಪಾರ ಬೆಳೆಹಾನಿಯಾಗಿದೆ. ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಮಳೆ ಆಗಿದೆ.