ಮಡಿಕೇರಿ: ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಸ್ವಲ್ಪ ಇಳಿಮುಖ ಆಗಿದೆ. ಆದರೂ ಕಾವೇರಿ, ಲಕ್ಷ್ಮಣ ತೀರ್ಥ ಸೇರಿದಂತೆ ಜಿಲ್ಲೆಯ ಪ್ರಮುಖ ನದಿಗಳಲ್ಲಿ ಪ್ರವಾಹ ಭೀತಿ ಮುಂದುವರಿದಿದೆ.
ಜಿಲ್ಲೆಯಲ್ಲಿ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಅನೇಕರು ಮನೆಗಳನ್ನು ಕಳೆದುಕೊಂಡಿದ್ದು, ಇದೀಗ ಅಳಿದು-ಉಳಿದ ವಸ್ತುಗಳ ಮರು ಸಂಗ್ರಹಣೆಯಲ್ಲಿ ಸಂತ್ರಸ್ತರು ತೊಡಗಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೇಲ್ಲಿಹುದಿಕೇರಿ ಗ್ರಾಮದಲ್ಲಿ ಮನೆಗಳನ್ನು ಕಳೆದಕೊಂಡ ಸಂತ್ರಸ್ತರು ತಮ್ಮ ಮನೆಗಳನ್ನು ನೋಡಿ ನೋವು ಅನುಭವಿಸುತ್ತಿದ್ದಾರೆ. ಅಲ್ಲದೆ ಮುಂದಿನ ಬದುಕು ಹೇಗೆ ಎಂದು ಚಿಂತಿಸುತ್ತಿದ್ದಾರೆ.
ಇಲ್ಲಿನ ಜನರು ಮನೆಯ ವಸ್ತುಗಳನ್ನು ಬಿಟ್ಟು ಬೇರೆ ಕಡೆ ಹೋಗಿದ್ದಾರೆ. ಆದರೆ ಸಾಕಿದ ನಾಯಿ ಮನೆಯವರು ಬಂದೇ ಬರುತ್ತಾರೆ ಎಂದು ಎಷ್ಟೇ ಮಳೆ ಬಂದರೂ ಮನೆಯಿಂದ ಎಲ್ಲಿಯೂ ಹೋಗುತ್ತಿಲ್ಲ. ಜೀವನ ದೊಡ್ಡದು ಎಂದು ಮನುಷ್ಯರು ಪ್ರಾಣಿಗಳನ್ನು ಬಿಟ್ಟು ಹೋಗಿದ್ದಾರೆ. ಪ್ರಾಣಿಗಳನ್ನು ಕರೆದುಕೊಂಡು ಹೋಗುವ ಸ್ಥಿತಿಯಲ್ಲಿ ಜನರು ಇರಲಿಲ್ಲ. ಆದರೆ ನಾಯಿ ನನ್ನ ಯಜಮಾನ ಬರುತ್ತಾರೆ ಎಂದು ಮನೆ ಬಳಿಯೇ ಕಾದು ಕುಳಿತಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.