ರಾಯಚೂರು: ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ ವೃದ್ಧರೊಬ್ಬರು ತಮ್ಮ ದೇಹದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಜಿಲ್ಲೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಮಲ್ಲಿಕಾರ್ಜುನ ಸ್ವಾಮಿಯವರ ತಂದೆ ಮಹಾಂತಯ್ಯ ಸ್ವಾಮಿ(87) ವಯೋಸಹಜ ಅನಾರೋಗ್ಯದಿಂದ ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ರಾಯಚೂರು ಕೃಷಿ ಮಹಾವಿದ್ಯಾಲಯದ ನಿವೃತ್ತ ಹಿರಿಯ ಕೃಷಿ ಸಹಾಯಕ ಮಹಾಂತಯ್ಯ ಸ್ವಾಮಿ ತಮ್ಮ ಸಾವಿನ ಬಳಿಕ ಕಣ್ಣು ಹಾಗೂ ದೇಹದಾನ ಮಾಡಲು ಮಕ್ಕಳಿಗೆ ತಿಳಿಸಿದ್ದರು. ಹೀಗಾಗಿ ಮಹಾಂತಯ್ಯ ಸ್ವಾಮಿ ಇಚ್ಚೆಯಂತೆ ಅವರ ಕಣ್ಣುಗಳನ್ನ ನಗರದ ನವೋದಯ ಮೆಡಿಕಲ್ ಕಾಲೇಜು ಹಾಗೂ ದೇಹವನ್ನ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ರಿಮ್ಸ್ಗೆ ದಾನ ಮಾಡಲಾಗಿದೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಹಾಂತಯ್ಯ ಸ್ವಾಮಿ ಶುಕ್ರವಾರ ಸಂಜೆ ರಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಗರದ ಅಸ್ಕಿಹಾಳ ಬಳಿಯಿರುವ ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲೋನಿಯ ಅವರ ಮನೆಯಲ್ಲಿ ಅಂತಿಮ ದರ್ಶನ ಬಳಿಕ ರಿಮ್ಸ್ ಆಸ್ಪತ್ರೆಗೆ ದೇಹದಾನ ಮಾಡಲಾಯಿತು.