ರಾಯಚೂರು: ಸ್ಥಳೀಯ ನಗರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ಗಲಾಟೆ ಜೋರಾಗಿದೆ. ಒಂದೆಡೆ ಕುದುರೆ ವ್ಯಾಪಾರ, ಪ್ರವಾಸಗಳು ನಡೆದಿದ್ದರೆ, ಇನ್ನೊಂದೆಡೆ ಹೊಡೆದಾಟಗಳು ನಡೆದಿವೆ.
ನಗರಸಭೆ ಅಧ್ಯಕ್ಷರ ಚುನಾವಣೆ ಹಿನ್ನೆಲೆ ಪಕ್ಷೇತರ ಸದಸ್ಯನನ್ನ ಹೈಜಾಕ್ ಮಾಡಿ ಬಿಜೆಪಿ ಮುಖಂಡರು ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ನಗರದ ವಾರ್ಡ್ ನಂ.29ರ ಪಕ್ಷೇತರ ಸದಸ್ಯ ಸುನೀಲ್ ಕುಮಾರ್ ಸೇರಿ ಕೆಲ ಪಕ್ಷೇತರ ಸದಸ್ಯರನ್ನು ಪ್ರವಾಸಕ್ಕೆ ಕರೆದೊಯ್ಯಲಾಗಿದೆ. ಇದನ್ನು ತಿಳಿದು ಸದಸ್ಯನನ್ನು ಕರೆದೊಯ್ಯಲು ಕಾಂಗ್ರೆಸ್ ಮುಖಂಡರು ಬಂದಾಗ ಆಂಧ್ರಪ್ರದೇಶ ವಿಜಯವಾಡದಲ್ಲಿ ಗಲಾಟೆಯಾಗಿದೆ. ಈ ಸದಸ್ಯ ಎರಡು ಕಡೆ ಗೇಮ್ ಆಡಿದ್ದಾನೆ ಎಂದು ಗೂಸಾ ಕೂಡ ಬಿದ್ದಿದ್ದು, ಸ್ಥಳದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ನಡುವೆ ಮಾರಾಮಾರಿ ನಡೆದಿದೆ. ಇದನ್ನೂ ಓದಿ: ತರಗತಿಯಲ್ಲಿ ಹಿಜಬ್ ಧರಿಸಿ ನಮಾಜ್ ಮಾಡಿದ ವಿದ್ಯಾರ್ಥಿನಿ – ವಿವಾದಕ್ಕೆ ಎಡೆಮಾಡಿಕೊಟ್ಟ ವೀಡಿಯೋ
ಇಬ್ಬರು ಪಕ್ಷೇತರರನ್ನು ಸೆಳೆದು ಬಿಜೆಪಿ ಮುಖಂಡರು ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಮಹಿಳಾ ಸದಸ್ಯರ ಕುಟುಂಬದವರನ್ನು ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಗಲಾಟೆ ಬಳಿಕ ವಾರ್ಡ್ ನಂ.1ರ ಬಿಜೆಪಿ ಸದಸ್ಯೆ ಲಕ್ಷ್ಮೀ ಎಂಬುವವರ ಪುತ್ರ ಸನ್ನಿ ರೊನಾಲ್ಡ್, ತಾಕತ್ತಿದ್ದರೆ ಸದಸ್ಯರನ್ನು ನಿಮ್ಮ ಕಡೆ ಕರೆದುಕೊಂಡು ಹೋಗಿ ಎಂದು ಅವಾಜ್ ಹಾಕಿರುವ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಈ ಹಿಂದಿನ ಅಧ್ಯಕ್ಷ ಕಾಂಗ್ರೆಸ್ನ ಇ. ವಿನಯಕುಮಾರ್ ವಿರುದ್ಧ ಪಕ್ಷಾತೀತವಾಗಿ ಸದಸ್ಯರು ಅವಿಶ್ವಾಸ ಮಂಡನೆ ಹಿನ್ನೆಲೆ ಅಧ್ಯಕ್ಷ ಸ್ಥಾನ ತೆರವಾಗಿದೆ. ಮಾರ್ಚ್ 30 ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿರುವ ಹಿನ್ನೆಲೆ ಕುದುರೆ ವ್ಯಾಪಾರ, ಪ್ರವಾಸ, ಹೊಡೆದಾಟ ಪಾಲಿಟಿಕ್ಸ್ ನಡೆದಿದೆ. ಒಟ್ಟು 35 ಸದಸ್ಯರಿರುವ ನಗರಸಭೆಯಲ್ಲಿ ಕಾಂಗ್ರೆಸ್ 11, ಬಿಜೆಪಿ 12, , ಜೆಡಿಎಸ್ 3, ಪಕ್ಷೇತರ 9 ಸ್ಥಾನ ಪಡೆದಿವೆ. ಕಾಂಗ್ರೆಸ್ನಿಂದ ಸಾಜಿದ್ ಸಮೀರ್, ಬಿಜೆಪಿಯಿಂದ ಲಲಿತಾ ಕಡಗೋಲರಿಂದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಯಿದೆ. ಇದನ್ನೂ ಓದಿ: ಗ್ರಾಮಕ್ಕೆ ಬಸ್ ಬಿಡಿ: ಸಿಎಂ ಕಾರು ತಡೆದು ಮನವಿ ಪತ್ರ ಕೊಟ್ಟ ವಿದ್ಯಾರ್ಥಿನಿಯರು
ಬೇಸಿಗೆ ಹಿನ್ನೆಲೆ ರಾಯಚೂರು ನಗರದಲ್ಲಿ ಕುಡಿಯುವ ನೀರು, ವಿದ್ಯುತ್ ದೀಪ ಸೇರಿ ನಾನಾ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಆದರೆ ನಗರಸಭೆ ಸದಸ್ಯರು ಮಾತ್ರ ಕುದುರೆ ವ್ಯಾಪಾರದಲ್ಲಿ ತೊಡಗಿದ್ದು, ಪರಸ್ಪರ ಹೊಡೆದಾಡಿಕೊಂಡು, ಹೊರರಾಜ್ಯ ಪ್ರವಾಸದಲ್ಲಿದ್ದಾರೆ.