ರಾಯಚೂರು: ಕೊರೊನಾ ಎಫೆಕ್ಟ್ ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು ರಾಯಚೂರಿನಲ್ಲಿ ಜನ ಕಿರಾಣಿ ಹಾಗೂ ಮೆಡಿಕಲ್ ಶಾಪ್ ಗಳಲ್ಲಿ ವಸ್ತುಗಳನ್ನ ಕೊಳ್ಳುತ್ತಿದ್ದಾರೆ. ಅಂತರದ ಮಾರ್ಕ್ ಮಾಡಿರುವ ಬಾಕ್ಸ್ ಗಳಲ್ಲೇ ನಿಂತು ಸಾಮಾಗ್ರಿಗಳನ್ನ ಖರೀದಿಸುವ ಮೂಲಕ ಜಾಗೃತಿ ಮೆರೆಯಲು ಮುಂದಾಗಿದ್ದಾರೆ. ಜನರಿಗೆ ಕಿರಾಣಿ, ತರಕಾರಿ ಹಾಗೂ ಮೆಡಿಕಲ್ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಹಲವೆಡೆ ಜನರು ಕೂಡ ಉತ್ತಮ ರೀತಿಯಲ್ಲಿ ಸ್ಪಂದನೆ ಮಾಡುತ್ತಿದ್ದಾರೆ.
ಸುರಕ್ಷತಾ ಅಂತರಕ್ಕೆ ಮುಂದಾಗಿರುವ ಜನ ಹಾಗೂ ಅಂಗಡಿಗಳ ಮಾಲೀಕರು ಸೋಂಕು ಹರಡುವಿಕೆ ತಡೆಯುವ ಸರ್ಕಾರದ ಕ್ರಮಗಳಿಗೆ ಸ್ಪಂದಿಸಿದ್ದಾರೆ. ಎಷ್ಟೇ ಕಟ್ಟುನಿಟ್ಟಾಗಿ ಹೇಳಿದರೂ ಕೆಲವೆಡೆ ಜನ ಮಾತು ಕೇಳುತ್ತಿಲ್ಲ. ಅಂತಹ ಪ್ರದೇಶಗಳಲ್ಲಿ ಪೊಲೀಸರು ದಡಂದಶಗುಣಂ ಎನ್ನುವಂತೆ ಲಾಠಿ ರುಚಿ ತೋರಿಸುತ್ತಿದ್ದಾರೆ.
ಬೆಳಗ್ಗೆ ಜನಜಂಗುಳಿಯಿಂದ ಕೂಡಿದ್ದ ತರಕಾರಿ ಮಾರುಕಟ್ಟೆ ಮಧ್ಯಾಹ್ನದ ವೇಳೆಗೆ ಸಂಪೂರ್ಣ ಖಾಲಿಯಾಗಿದೆ. ನಾಳೆಯಿಂದ ವಾರ್ಡ್ಗಳಲ್ಲೆ ತರಕಾರಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಗರದ 35 ವಾರ್ಡ್ ಜನರಿಗೆ 17 ಸ್ಥಳಗಳಲ್ಲಿ ತರಕಾರಿ ಕೊಳ್ಳಲು ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಲು ಕಿರಾಣಿ ಅಂಗಡಿ , ಔಷಧಿ ಅಂಗಡಿ ಮಾಲೀಕರಿಗೆ ಸೂಚಿಸಲಾಗಿದೆ.