ರಾಯಚೂರು: ಕಂಕಣ ಸೂರ್ಯಗ್ರಹಣ ಹಿನ್ನೆಲೆ ರಾಯಚೂರು ಜಿಲ್ಲೆಯ ಬಹುತೇಕ ದೇವಾಲಯಗಳಲ್ಲಿ ಬೆಳಿಗ್ಗೆ 8 ಗಂಟೆಯ ಬಳಿಕ ಪೂಜೆಕಾರ್ಯ ನಿಲ್ಲಿಸಲಾಗಿದೆ. ಆದರೆ ತಾಲೂಕಿನ ದೇವಸೂಗೂರಿನ ಶ್ರೀ ಸೂಗೂರೇಶ್ವರ ದೇವಸ್ಥಾನದಲ್ಲಿ ಮಾತ್ರ ಎಂದಿನಂತೆ ಪೂಜೆ, ಮಂಗಳಾರತಿ, ದೇವರ ದರ್ಶನ ನಡೆದಿದೆ. ವಿಶೇಷ ವಾಸ್ತುವಿನಿಂದ ನಿರ್ಮಿಸಿರುವ ಈ ಐತಿಹಾಸಿಕ ದೇವಸ್ಥಾನಕ್ಕೆ ಗ್ರಹಣದೋಷವೇ ತಟ್ಟುವುದಿಲ್ಲ.
ಸೂಗರೇಶ್ವರನ ತ್ರಿಕಾಲ ಪೂಜೆಯೇ ಸನ್ನಿಧಾನದ ವಿಶೇಷವಾಗಿದ್ದು, 800 ವರ್ಷಗಳ ಹಳೆಯ ದೇವಸ್ಥಾನದ ವಾಸ್ತುವೇ ಅಚ್ಚರಿ ಮೂಡಿಸುವಂತದ್ದಾಗಿದೆ. ದೇವಸ್ಥಾನದ ಪ್ರಾಂಗಣದಲ್ಲಿ ಸೂರ್ಯಚಂದ್ರನ ಮಧ್ಯ ಈಶ್ವರನಿರುವ ಹಾಲ್ಗಂಬವಿದೆ. ಗರ್ಭಗುಡಿಯ ಹೊರಾಂಗಣ ಗೊಡೆಗೆ ಸೂರ್ಯ ಮತ್ತು ಕನ್ಯೆಯ ಶಿಲ್ಪಕಲೆಯಿದೆ. ಸೂರ್ಯನ ಕಿರಣಗಳು ಇದಕ್ಕೆ ತಾಕುವುದರಿಂದ ದೇವಸ್ಥಾನಕ್ಕೆ ಗ್ರಹಣ ದೋಷವಿಲ್ಲ ಅಂತ ಇಲ್ಲಿನ ಅರ್ಚಕರು ಹೇಳುತ್ತಾರೆ.
- Advertisement 2
- Advertisement 3
ಇನ್ನೂ ಗ್ರಹಣ ಹಿನ್ನೆಲೆ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ ಮಠ, ರಾಯಚೂರಿನ ಉತ್ತರಾಧಿ ಮಠ, ಜೋಡು ಆಂಜನೇಯ ದೇವಾಲಯ, ರಾಯರ ಶಾಖಾ ಮಠಗಳಲ್ಲಿ ಬೆಳಿಗ್ಗೆ ಎಂದಿನಂತೆ ಪೂಜೆ ನಡೆದಿದ್ದು 8 ಗಂಟೆ ಬಳಿಕ ಪೂಜೆಗಳನ್ನ ನಿಲ್ಲಿಸಲಾಗಿದೆ. 9:30 ರಿಂದ ಗ್ರಹಣ ಬಿಡುವವರೆಗೂ ಶಾಂತಿ ಹೋಮ ನಡೆಸಿ 11 ಗಂಟೆ 8 ನಿಮಿಷ ಬಳಿಕ ದೇವಾಲಯಗಳ ಸ್ವಚ್ಛತಾ ಕಾರ್ಯ ಮಾಡಲಿದ್ದಾರೆ.