ರಾಯಚೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆ ಇಡೀ ದೇಶವೇ ಲಾಕ್ಡೌನ್ ಆಗಿದ್ದರೂ ಜನ ರಸ್ತೆಯಲ್ಲಿ ಓಡಾಡುವುದನ್ನ ಕಡಿಮೆ ಮಾಡುತ್ತಿಲ್ಲ. ಹೀಗಾಗಿ ರಾಯಚೂರು ಪೊಲೀಸರು ವಿನೂತನ ಪ್ರಯತ್ನಗಳಿಗೆ ಮುಂದಾಗುತ್ತಿದ್ದಾರೆ.
ಜಿಲ್ಲಾ ಪೋಲಿಸ್ ಅಧೀಕ್ಷಕ ಡಾ.ಸಿ.ಬಿ.ವೇದಮೂರ್ತಿ ಸ್ವತಃ ನಗರದ ಪ್ರಮುಖ ವೃತ್ತಗಳಲ್ಲಿ ಕೊರೊನಾ ಜಾಗೃತಿ ಹಾಡು ಹಾಡಿ ಜನರನ್ನ ಮನೆಗೆ ಕಳುಹಿಸುತ್ತಿದ್ದಾರೆ. ನಗರದ ತೀನ್ ಕಂದಿಲ್, ಗಂಜ್ ವೃತ್ತ ಸೇರಿ ವಿವಿಧೆಡೆ ವೇದಮೂರ್ತಿ ಅವರು ಹಾಡು ಹೇಳುವ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಕೊರೊನಾ ಹಿನ್ನೆಲೆ ಲಾಕ್ಡೌನ್ ಇದ್ದರೂ ನಗರದಲ್ಲಿ ಜನ ಓಡಾಡುವುದು ಕಡಿಮೆಯಾಗಿಲ್ಲ. ಲಾಠಿ ಏಟಿಗೂ ಬಗ್ಗಲಿಲ್ಲ, ಬೈಕ್ ಜಪ್ತಿ ಮಾಡಿದರೂ ಜನ ಜಗ್ಗಲಿಲ್ಲ. ಹೀಗಾಗಿ ಕೊನೆಗೆ ಕರೊಕೆ ಹಾಡು ಹೇಳುವ ಮೂಲಕ ಜಾಗೃತಿಗೆ ಮೂಡಿಸುತ್ತಿದ್ದಾರೆ.
ಒಳಿತು ಮಾಡು ಮನುಸ, ನೀ ಇರೋದು ಮೂರು ದಿವಸ ಹಾಡಿನ ದಾಟಿಯಲ್ಲೇ ‘ಮನೆಯಲ್ಲಿಯೋ ಮನುಸ ಬಂದೈತೋ ಕೊರೊನಾ ವೈರಸಾ… ಕಾಲ ಕಾಲಕ್ಕೆ ಕೈತೊಳೆಯಬೇಕು ಎಂದು ಹಾಡುವ ಮೂಲಕ ಜನ ಜಾಗೃತಿ ಕೈಗೊಂಡಿದ್ದಾರೆ.
ಈಗಾಗಲೇ ಡ್ರೋಣ್ ಕ್ಯಾಮೆರಾ ಬಳಸುವ ಮೂಲಕ ನಗರದ ಬಡಾವಣೆಗಳಲ್ಲಿ ಜನ ಸೇರದಂತೆ ತಡೆಯಲು ಕ್ರಮವಹಿಸಲಾಗಿದೆ. ಡ್ರೋಣ್ ಕ್ಯಾಮೆರಾ ಮೂಲಕ ಜನರನ್ನು ಚದುರಿಸುವ ಕೆಲಸವನ್ನೂ ಪೊಲೀಸ್ ಇಲಾಖೆ ಮಾಡುತ್ತಿದೆ.