– ಹಿರಿಯ ನಾಯಕರಲ್ಲಿ ಸಮನ್ವಯತೆ ಇಲ್ಲ
ರಾಯಚೂರು: ರಾಜೀನಾಮೆ ನೀಡಲು ಹೊರಟಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ಬಿಟ್ಟರೂ ನಾನು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿಯವರು ನಮ್ಮ ಸಂಬಂಧಿಗಳಿಗೆ ಅವರೊಂದಿಗೆ ಉತ್ತಮ ಸ್ನೇಹವಿದೆ. ಇದೇ ಕಾರಣಕ್ಕೆ ರಾಜೀನಾಮೆ ನೀಡುವ ಕುರಿತು ಮಾಧ್ಯಮಗಳಲ್ಲಿ ನನ್ನ ಹೆಸರು ಬರುತ್ತದೆ ಎಂದು ಹೇಳಿದರು.
ಮಧ್ಯಂತರ ಚುನಾವಣೆ ಬರಬಹುದು. ನಾನು ಈಗಲೂ ಸ್ಪಷ್ಟಪಡಿಸುತ್ತೇನೆ ನಾನು ಕ್ಷೇತ್ರದ ಜನತೆಯ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ರಮೇಶ್ ಜಾರಕಿಹೊಳಿ ಪಕ್ಷ ಬಿಟ್ಟರೂ ನಾನು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಈಗ ಹಿರಿಯ ನಾಯಕರಿಂದ ಸಮನ್ವಯತೆ ಇಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದೇ ರೀತಿ ಸಮನ್ವಯ ಕೊರತೆ ಇದ್ದರೆ ಸರ್ಕಾರದಲ್ಲಿ ಯಾಕೆ ಇರಬೇಕು. ಹಿರಿಯ ಮುಖಂಡರು ಈಗ ಸಮನ್ವಯತೆ ಸಾಧಿಸಲು ಯತ್ನಿಸಬೇಕು. ಸಮಿಶ್ರ ಸರಕಾರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಇದ್ದ ಸಮನ್ವಯತೆ ಈಗ ಇಲ್ಲದಂತಾಗಿದೆ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.