ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಇದುವರೆಗೂ ಕಾಲಿಡದಿದ್ದರೂ ಗ್ರೀನ್ ಝೋನ್ನಲ್ಲಿರುವ ರಾಯಚೂರಿನಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಮಾಡಿದೆ.
ನಗರ, ಪಟ್ಟಣ ಪ್ರದೇಶಗಳಲ್ಲಿ ಬಡಾವಣೆಯಿಂದ ಬಡಾವಣೆಗೆ ತೆರಳದಂತೆ ಸೀಲ್ ಮಾಡಲಾಗಿದೆ. ಇದರಿಂದ ರೋಸಿಹೋದ ಕೆಲ ಪುಂಡರು ಪೊಲೀಸರ ಮೇಲೆ ಹಲ್ಲೆ ಮಾಡಿರುವ ಘಟನೆಗಳು ನಡೆದಿವೆ. ಕೊರೊನಾ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆಗಳು ಹೆಚ್ಚಾಗಿದ್ದು ಸಿಂಧನೂರು ಗ್ರಾಮೀಣ ಠಾಣೆ, ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿವೆ. ಎರಡು ಪ್ರಕರಣಗಳಲ್ಲಿ ಆರೋಪಿಗಳ ಬಂಧನ ಮಾಡಲಾಗಿದೆ ಎಂದು ರಾಯಚೂರು ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ಶೇ.50ರಷ್ಟು ಅಪರಾಧ ಪ್ರಕರಣಗಳು ಕಡಿಮೆಯಾಗಿದ್ದು, ಮದ್ಯದಂಗಡಿ ಹಾಗೂ ಶಾಲೆಗಳ ಕಂಪ್ಯೂಟರ್ ಕಳ್ಳತನ ಇಸ್ಪೇಟ್ ಪ್ರಕರಣ ಹೆಚ್ಚಾಗಿವೆ. 50ಕ್ಕೂ ಹೆಚ್ಚು ತಾಂಡಾಗಳಲ್ಲಿ ಕಳ್ಳಭಟ್ಟಿ ದಂಧೆ ನಡೆದಿದ್ದು 120 ಪ್ರಕರಣ ದಾಖಲಾಗಿವೆ. ಜಿಲ್ಲೆಯಲ್ಲಿ 20 ಸೆಕ್ಟರ್ ಮಾಡಲಾಗಿದ್ದು ಪೊಲೀಸರು ನಿರಂತರ ಲಾಕ್ಡೌನ್ ಕರ್ತವ್ಯದಲ್ಲಿದ್ದಾರೆ. ಸದ್ಯ ಲಾಕ್ಡೌನ್ ನಲ್ಲಿ ಕೊಂಚ ರಿಲೀಫ್ ನೀಡಲಾಗಿದೆ. ಕಾರ್ಖಾನೆ, ಕೈಗಾರಿಕೆಗೆ ಬೇರೆಡೆಯಿಂದ ಕೆಲಸಗಾರರು ಬರುವುದಕ್ಕೆ ಅನುಮತಿಯಿಲ್ಲ. ಸ್ಥಳೀಯ ಹೆಚ್ಚಿನ ಕಾರ್ಮಿಕರು ಬೇಕಿದ್ದರೆ ಸಾಮಾಜಿಕ ಅಂತರ ಕಾಪಾಡಬೇಕು, ಕಡಿಮೆ ಜನರನ್ನು ವಾಹನಗಳಲ್ಲಿ ಕರೆದುಕೊಂಡು ಬರಬೇಕು ಎಂದು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.