ರಾಯಚೂರು: ಪ್ರತಾಪ್ ಗೌಡ ಪಾಟೀಲ್ ಜೂನ್ನಲ್ಲಿ ಮಂತ್ರಿಯಾಗುವುದು ಪಕ್ಕಾ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ರಾಯಚೂರಿನ ಮಸ್ಕಿಯಲ್ಲಿ ಪ್ರತಾಪ್ ಗೌಡ ಪಾಟೀಲ್ ಮನೆಗೆ ಭೇಟಿ ನೀಡಿದ ವೇಳೆ ಮಾತನಾಡಿದ ಸಚಿವ ಜಾರಕಿಹೊಳಿ, ಪ್ರತಾಪ್ ಗೌಡ ಪಾಟೀಲ್ ಅವರ ಪ್ರಕರಣದ ಕೋರ್ಟ್ ತೀರ್ಪು ಬಾಕಿ ಇದೆ. ಆ ತೀರ್ಪು ಪ್ರಕಟವಾಗುವುದಕ್ಕೆ ವಿಳಂಬವಾಗಿದೆ ಆದ್ರೆ ಜೂನ್ನಲ್ಲಿ ಮಂತ್ರಿಯಾಗುವುದು ಪಕ್ಕಾ ಎಂದರು.
ಜೂನ್ನಲ್ಲಿ ಆರ್.ಶಂಕರ್, ಪ್ರತಾಪ್ ಗೌಡ ಹಾಗೂ ಮುನಿರತ್ನ ಮೂರು ಜನ ಮಂತ್ರಿಯಾಗಲಿದ್ದಾರೆ ಅಂತ ಭವಿಷ್ಯ ನುಡಿದರು. ಮಸ್ಕಿ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ರಾಜೀನಾಮೆಯಿಂದ ಮಸ್ಕಿ ಕ್ಷೇತ್ರಕ್ಕೆ ಶಾಸಕರು ಇಲ್ಲದಂತಾಗಿದೆ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಪ್ರತಾಪ್ ಗೌಡ ಅವರ ವಿರುದ್ಧ ಸೋತಿದ್ದ ಅಭ್ಯರ್ಥಿ, ಹಾಲಿ ಕಾಡಾ ಅಧ್ಯಕ್ಷ ಬಸನಗೌಡ ತುರವಿಹಾಳ ಇಂದು ಸಚಿವ ರಮೇಶ್ ಜಾರಕಿಹೊಳಿ ಹಾಗೂ ಪ್ರತಾಪ್ ಗೌಡ ಅವರೊಂದಿಗೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಪ್ರತಾಪಗೌಡ ಪಾಟೀಲ್ ವಿರುದ್ಧ ಅಕ್ರಮ ಮತದಾನದ ದೂರು ದಾಖಲಿಸಿದ್ದ ಬಸನಗೌಡ ಪ್ರಕರಣವನ್ನು ಹಿಂಪಡೆದಿದ್ದರು.