ರಾಯಚೂರು: ಪರೀಕ್ಷೆಯಲ್ಲಿ ಅಂಕ ನೀಡುವ ವಿಚಾರವಾಗಿ ತಾರತಮ್ಯ ಯಾಕೆ ಮಾಡುತ್ತೀರಿ ಅಂತ ಪ್ರಶ್ನಿಸಿದ್ದಕ್ಕೆ ರಾಯಚೂರಿನ ಮಾನ್ವಿಯಲ್ಲಿ ಉಪನ್ಯಾಸಕನೋರ್ವ ವಿದ್ಯಾರ್ಥಿಗಳಿಗೆ ಚಪ್ಪಲಿಯಿಂದ ಥಳಿಸಿರುವ ಘಟನೆ ನಡೆದಿದೆ.
ಮಾನ್ವಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಚಂದ್ರಶೇಖರ್ ವಿದ್ಯಾರ್ಥಿ ಪೃಥ್ವಿರಾಜ್ ಹಾಗೂ ಇತರರಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಏಕಾಏಕಿ ವಿದ್ಯಾರ್ಥಿಗಳಿಗೆ ಚಪ್ಪಲಿಯಿಂದ ಹೊಡೆದಿರುವ ದೃಶ್ಯವು ಕಾಲೇಜಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉಪನ್ಯಾಸಕನ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ.
ಚಂದ್ರಶೇಖರ್ ಅವರು ಉದ್ದೇಶ ಪೂರ್ವಕವಾಗಿ ಕೆಲ ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳನ್ನು ಕಡಿಮೆ ನೀಡುತ್ತಾರೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳ ಜೊತೆ ಅನುಚಿವಾಗಿ ವರ್ತಿಸುತ್ತಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತಿನಲ್ಲೆ ಉತ್ತರ ಕೊಟ್ಟು ಮುಗಿಸಬಹುದಾಗಿದ್ದನ್ನು ಚಪ್ಪಲಿ ಏಟಿನ ಮೂಲಕ ಬೆಳೆಸಿದ್ದಕ್ಕೆ ಎಂದು ಉಪನ್ಯಾಸಕರಿಗೆ ಪ್ರಾಂಶುಪಾಲರು ಛೀಮಾರಿ ಹಾಕಿದ್ದಾರೆ ಎನ್ನಲಾಗಿದೆ. ಜೊತೆಗೆ ವಿದ್ಯಾರ್ಥಿಗಳ ಪೋಷಕರು ಸಹ ಹಲ್ಲೆ ಮಾಡಿದ ಉಪನ್ಯಾಸಕ ಚಂದ್ರಶೇಖರ್ ಅವರ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ.
ಕೊನೆಗೆ ಉಪನ್ಯಾಸಕ ಚಂದ್ರಶೇಖರ್ ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದ್ದರಿಂದ ವಿದ್ಯಾರ್ಥಿಗಳು ಸುಮ್ಮನಾಗಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಚಪ್ಪಲಿಯಿಂದ ಹೊಡೆದ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.