ರಾಯಚೂರು: ಸಮಾಜ ಅಂತ ಬಂದಾಗ ನಾಯಕ ಸಮಾಜಕ್ಕೆ ಡಿಸಿಎಂ ಹುದ್ದೆ ನೀಡಬೇಕು. ಆದರೆ ಈಗ ಸಿಎಂ ಒತ್ತಡದಲ್ಲಿದ್ದಾರೆ. ಮೂರು ಜನರನ್ನ ಡಿಸಿಎಂ ಮಾಡಿದ್ದೆ ತಪ್ಪು, ನಾಲ್ಕನೆಯ ಡಿಸಿಎಂ ಮಾಡಿದರೆ ನಾಯಕ ಸಮಾಜಕ್ಕೆ ನೀಡಬೇಕು ಅಂತ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.
ಮಸ್ಕಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಸರ್ಕಾರ ಮುಂದಿನ ಮೂರು ವರ್ಷ ಪೂರ್ಣಗೊಳಿಸುತ್ತದೆ. ಸಚಿವ ಸಂಪುಟದ ವಿಸ್ತರಣೆ 2-3 ದಿನಗಳಲ್ಲಿ ಆಗುತ್ತದೆ. ಸೋತವರಿಗೂ ಸಚಿವ ಸ್ಥಾನ ನೀಡಬೇಕು. ಆದರೆ ವಿಶ್ವನಾಥ್ ರಿಗೆ ಚುನಾವಣೆ ಸ್ಪರ್ಧಿಸಬಾರದೆಂದು ಹೇಳಿದ್ದರು. ಮುಂದಿನ ದಿನಗಳಲ್ಲಿ ವಿಧಾನಪರಿಷತ್ ಸ್ಥಾನ ಖಾಲಿಯಾದಾಗ ಅವರಿಗೆ ಸಚಿವ ಸ್ಥಾನ ನೀಡಬಹುದು ಅಂತ ತಿಳಿಸಿದರು.
ನಾವು 17 ಜನರು ಒಟ್ಟಾಗಿದ್ದೇವೆ, ನಮ್ಮಲ್ಲಿ ಒಡಕಿಲ್ಲ. ಯಡಿಯೂರಪ್ಪ ಮೂರು ಸ್ಥಾನಗಳನ್ನು ಬಿಟ್ಟು ಸಚಿವ ಸಂಪುಟ ವಿಸ್ತರಿಸಲಿದ್ದಾರೆ. 17 ಜನರನ್ನು ಕರೆದು ಮಾತನಾಡುತ್ತೇನೆ ಎಂದಿದ್ದಾರೆ. ಆದರೆ ಇಲ್ಲಿಯವರೆಗೂ ನಮ್ಮನ್ನು ಕರೆದಿಲ್ಲ. ಇಂದು ನಾನು ಬೆಂಗಳೂರಿಗೆ ಹೋಗಲಿದ್ದೇನೆ. ನಂತರದಲ್ಲಿ ನಮಗೂ ಸಚಿವ ಸ್ಥಾನ ಸಿಗಲಿದೆ. ನ್ಯಾಯಾಲಯದಲ್ಲಿನ ಪ್ರಕರಣದಿಂದ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ವಿಳಂಬವಾಗಿದೆ ಅಂತ ಪ್ರತಾಪ್ ಗೌಡ ಪಾಟೀಲ್ ಹೇಳಿದರು.