ರಾಯಚೂರು: ಜಿಲ್ಲಾ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿ ಏಕಕಾಲದಲ್ಲಿ ದಾಳಿ ನಡೆಸಿ ಸಾವಿರಾರು ಲೀಟರ್ ನಷ್ಟು ಕಳ್ಳಭಟ್ಟಿ ತಯಾರಿಕೆಗೆ ಬಳಸುವ ಬೆಲ್ಲದ ಕೊಳೆ ಜಪ್ತಿ ಮಾಡಿದ್ದಾರೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಜಕ್ಕೆರುಮಡು ತಾಂಡದಲ್ಲಿ ದಾಳಿ ನಡೆಸಿ ಕಾಳಪ್ಪ, ಪೊನ್ನಪ್ಪ ರಾಥೋಡ್ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಐವತ್ತಕ್ಕೂ ಅಧಿಕ ಸಿಬ್ಬಂದಿಗಳು ಏಕಕಾಲದಲ್ಲಿ ದಾಳಿ ಮಾಡಿದ್ದು ಕಳ್ಳಭಟ್ಟಿ ತಯಾರಿಕೆಯಲ್ಲಿ ತೊಡಗಿದ್ದ ತಾಂಡಾ ನಿವಾಸಿಗಳು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.
ದಾಳಿ ಸಂದರ್ಭದಲ್ಲಿ ಪೊಲೀಸ್ ಮತ್ತು ಕೆಲ ತಾಂಡಾ ನಿವಾಸಿಗಳೊಂದಿಗೆ ಮಾತಿನ ಚಕಮಕಿ ನಡೆದಿದೆ. ದಾಳಿ ಬಳಿಕ ಅಧಿಕಾರಿಗಳು ಕಳ್ಳಭಟ್ಟಿ ಕೊಳೆ ಹಾಗೂ ಕೊಡಗಳನ್ನು ನೆಲದಲ್ಲಿ ಹೂತು ಹಾಕಿದ್ದಾರೆ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆದಿದ್ದು ಪ್ರಕರಣ ದಾಖಲಿಸಲಾಗಿದೆ. ಲಾಕ್ಡೌನ್ ಹಿನ್ನೆಲೆ ಮದ್ಯ ಮಾರಾಟ ನಿಷೇಧವಾಗಿರುವುದರಿಂದ ಅಕ್ರಮ ಮದ್ಯಕ್ಕೆ ಡಿಮ್ಯಾಂಡ್ ಬಂದಿದೆ. ಹೀಗಾಗಿ ಕಳ್ಳಭಟ್ಟಿ ದಂಧೆ ಜಿಲ್ಲೆಯಲ್ಲಿ ಜೋರಾಗಿ ನಡೆದಿದೆ.
ನಿರಂತರವಾಗಿ ದಾಳಿ ನಡೆಸಿರುವ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಲಿಂಗಸುಗೂರು ತಾಲೂಕಿನಲ್ಲಿ ಭರ್ಜರಿ ಬೇಟೆಯಾಡಿದ್ದಾರೆ. ಇಡೀ ತಾಂಡವೇ ಕಳ್ಳಭಟ್ಟಿಯಲ್ಲಿ ತೊಡಗಿದ್ದು ಸಾವಿರಾರು ಲೀಟರ್ ಕಳ್ಳಭಟ್ಟಿ ಕೊಳೆ ಜಪ್ತಿ ಮಾಡಿದ್ದಾರೆ.