ರಾಯಚೂರು: ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಭಾರತೀಯ ಸೇನೆಯ ವಿವಿಧ ಸೈನಿಕ ಹುದ್ದೆಗಳ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸುವ ಯುವಕರಿಗೆ ನಗರದ ಜನ ಅನ್ನ ದಾಸೋಹವನ್ನ ಏರ್ಪಡಿಸಿದ್ದಾರೆ.
ಡಿಸೆಂಬರ್ 10 ರಿಂದ 20 ರ ವರೆಗೆ ಕೃಷಿ ವಿವಿ ಆವರಣದಲ್ಲಿ ನೇಮಕಾತಿ ರ್ಯಾಲಿ ನಡೆಯುತ್ತಿದ್ದು, ಇದರಲ್ಲಿ ಭಾಗವಹಿಸಿರುವ ರಾಯಚೂರಿನ 1,700 ಜನ ಯುವಕರು ಸೇರಿ ಒಟ್ಟು 34,492 ಸೇನಾ ಉದ್ಯೋಗಾರ್ಥಿಗಳಿಗೆ ಊಟ, ತಿಂಡಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ನಗರದ ಡ್ಯಾಡಿ ಕಾಲೋನಿಯ ಶ್ರೀ ಈಶ್ವರ ದೇವಾಲಯ ಸೇವಾ ಸಮಿತಿ ಊಟ, ತಿಂಡಿಯ ದಾಸೋಹ ಏರ್ಪಡಿಸಿದ್ದು, ರೋಟರಿ ಕ್ಲಬ್ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಸೇನೆ ಸೇರಿ ದೇಶ ಸೇವೆ ಮಾಡಲು ಮುಂದಾದ ಯುವಕರಿಗೆ ಅನಾನುಕೂಲವಾಗದಿರಲಿ ಎಂದು ದಾನಿಗಳು ಮುಂದೆ ಬಂದು ಅನ್ನದಾಸೋಹಕ್ಕೆ ಕೈ ಜೋಡಿಸಿದ್ದಾರೆ.
ರಾಯಚೂರು ಜನರ ಸಹಕಾರ ಕಂಡು ಸೇನಾ ಅಧಿಕಾರಿಗಳು ಸಹ ಖುಷಿ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗಾವಿ ಜಿಲ್ಲೆಯ ಯುವಕರ ನೇಮಕಾತಿ ಪ್ರಕ್ರಿಯೆ ನಡೆದಿದೆ. ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆ ಬಳಿಕ ಅಂತಿಮ ಆಯ್ಕೆ ನಡೆಯಲಿದೆ. ಸೋಲ್ಜರ್ ಜಿ.ಡಿ, ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ಟೆಕ್ನಿಕಲ್ ಎವಿಯೇಷನ್, ಸೋಲ್ಜರ್ ಕ್ಲರ್ಕ್/ಸ್ಟೋರ್ ಕೀಪರ್ ಮತ್ತು ಸೋಲ್ಜರ್ ಸ್ಟಿವಾರ್ಡ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv