ಮುಂಬೈ: ಕನ್ನಡಿಗ ಕೆ.ಎಲ್ ರಾಹುಲ್ ಜವಾಬ್ದಾರಿಯುತ ಶತಕದ ನೆರವಿನಿಂದ ರಣಜಿ ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕ ತಂಡವು ಮುಂಬೈ ತಂಡದ ವಿರುದ್ಧ 4 ವಿಕೆಟ್ಗಳ ಜಯ ಸಾಧಿಸಿದೆ. ಈ ಮೂಲಕ ರಣಜಿ ಸೆಮಿಫೈನಲ್ ತಲುಪಿದ್ದು, ಫೆಬ್ರವರಿ 15 ರಂದು ನಡೆಯುವ ಮೊದಲ ಸೆಮಿಸ್ನಲ್ಲಿ ಉತ್ತರಾಖಂಡ ತಂಡವನ್ನು ಎದುರಿಸಲಿದೆ.
ಲೀಗ್ ಸುತ್ತಿನ ಕೊನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆದ್ದಿದ್ದ ಕರ್ನಾಟಕ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಬಿಕೆಸಿ ಮೈದಾನದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡಿದೆ, ಆಪತ್ಬಾಂಧವ ಕೆ.ಎಲ್ ರಾಹುಲ್ ಅದ್ಭುತ ಶತಕದ ನೆರವಿನಿಂದ ಕರ್ನಾಟಕ ತಂಡ ಗೆಲುವು ಸಾಧಿಸಿದ್ದು, ಮೊದಲ ಸೆಮಿಫೈನಲ್ ಪ್ರವೇಶಿಸಿದೆ.
ರಾಹುಲ್- ಸ್ಮರಣ್ ಶತಕದ ಜೊತೆಯಾಟ
3ನೇ ದಿನದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿದ್ದ ಕರ್ನಾಟಕಕ್ಕೆ ಉಳಿದೆರಡು ದಿನಗಳಲ್ಲಿ 212 ರನ್ ಗಳ ಅಗತ್ಯವಿತ್ತು. 60 ರನ್ ಗಳಿಸಿದ್ದ ಕೆಎಲ್ ರಾಹುಲ್ ಅವರು 9 ರನ್ ಗಳಿಸಿದ್ದ ಕರುಣ್ ನಾಯರ್ ಅವರೊಂದಿಗೆ ಸೋಮವಾರ ದಿನದಾಟ ಪ್ರಾರಂಭಿಸಿದಾಗ ಈ ಜೋಡಿ ಬಹಳ ಹೊತ್ತು ಕ್ರೀಸ್ನಲ್ಲಿ ನೆಲೆಯೂರಬೇಕಾದ ಅಗತ್ಯವಿತ್ತು. ಆದರೆ 13 ರನ್ ಗಳಿಸಿದ ಕರುಣ್ ನಾಯರ್ ಅವರು ಔಟಾಗಿ ಪೆವಿಲಿಯನ್ಗೆ ಮರಳಿದರು. ಆ ಬಳಿಕ ರವಿಚಂದ್ರನ್ ಸ್ಮರಣ್ ಅವರನ್ನ ಸೇರಿಕೊಂಡ ರಾಹುಲ್ ಮಹತ್ವದ 147 ರನ್ ಗಳ ಜೊತೆಯಾಟವಾಡಿದ್ರು. ಹೀಗಾಗಿ ಕರ್ನಾಟಕ ಗೆಲುವಿನ ಸನಿಹಕ್ಕೆ ಬಂದಿತು.
ತಂಡದ ಮೊತ್ತ 266 ಆಗಿದ್ದಾಗ ತುಷಾರ್ ದೇಶಪಾಂಡೆ ಬೌಲಿಂಗ್ನಲ್ಲಿ ರಾಹುಲ್ ಕ್ಯಾಚ್ ಕೊಟ್ಟು ಔಟಾದರು. 182 ಎಸೆತಗಳನ್ನು ಎದುರಿಸಿದ ಅವರು 14 ಬೌಂಡರಿ ಮತ್ತು 1 ಸಿಕ್ಸರ್ ಇದ್ದ 130 ರನ್ ಗಳಿಸಿದರು. ರಾಹುಲ್ ವಿಕೆಟ್ ಪತನದ ಬೆನ್ನಲ್ಲೇ ಮುಂಬೈ ತಂಡ ಆಲ್ರೌಂಡರ್ ಶ್ರೇಯಸ್ ಗೋಪಾಲ್ (1) ಮತ್ತು ವಿಕೆಟ್ ಕೀಪರ್ ಬ್ಯಾಟರ್ ಕೃತಿಕ್ ಕೃಷ್ಣ (2) ಅವರ ವಿಕೆಟ್ ಅನ್ನು ಬೇಗನೇ ಎಗರಿಸಿ ಕರ್ನಾಟಕಕ್ಕೆ ಆಘಾತ ನೀಡಿತ್ತು.
ಈ ಹಂತದಲ್ಲಿ ಶಾರ್ದೂಲ್ ಠಾಕೂರ್ ಬಳಗದಲ್ಲಿ ಗೆಲುವಿನ ಆಸೆ ಚಿಗುರಿಕೊಂಡಿತ್ತು. ಆದರೆ ವಿದ್ಯಾಧರ್ ಪಾಟೀಲ್ (31 ನಾಟೌಟ್) ಅವರೊಂದಿಗೆ ಸೇರಿಕೊಂಡ ಸ್ಮರಣ್ ರವಿಚಂದ್ರನ್ ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು. ಕವಿಚಂದ್ರನ್ ಸ್ಮರಣ್ ಅವರು 123 ಎಸೆತಗಳಿಂದ 11 ಬೌಂಡರಿಗಳಿದ್ದ 83 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್
ಮೊದಲ ಇನ್ನಿಂಗ್ಸ್
ಮುಂಬೈ – 120/10, ಕರ್ನಾಟಕ – 173/10
2ನೇ ಇನ್ನಿಂಗ್ಸ್
ಮುಂಬೈ – 377/10, ಕರ್ನಾಟಕ – 325/6


