– ಕಾಂಗ್ರೆಸ್ ಬಲವಿರುವ ಬೂತ್ಗಳಲ್ಲೇ ಮತಗಳ್ಳತನ: ರಾಗಾ
ನವದೆಹಲಿ: ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕೆಲ ದಾಖಲೆಗಳನ್ನ ನೀಡುತ್ತೇನೆ, ತೀರ್ಮಾನ ನಿಮ್ಮದು. ನೀವು ನಂಬುತ್ತೀರಾ..!? ಒಂದು ಕ್ಷೇತ್ರದಲ್ಲಿ (ಆಳಂದ) 2023ರ ಎಲೆಕ್ಷನ್ ವೇಳೆ 6018 ಮತದಾರರನ್ನ ಡಿಲೀಟ್ ಮಾಡಲು ಯತ್ನಿಸಿದರು ಎಂದು ದೂರಿದ್ದಾರೆ.
ಬೇರೆ ರಾಜ್ಯಗಳ ಫೋನ್ ನಂಬರ್ ಬಳಕೆ ಮಾಡಲಾಗಿದೆ. ಕಾಂಗ್ರೆಸ್ ವೋಟ್ಗಳನ್ನೇ ಟಾರ್ಗೆಟ್ ಮಾಡಲಾಗಿದೆ. ಸೂರ್ಯಕಾಂತ್ ಹೆಸರು ಬಳಸಿ 14 ನಿಮಿಷದಲ್ಲಿ 12 ವೋಟ್ ಡಿಲೀಟ್ ಮಾಡಲಾಗಿದೆ. ಕಾಂಗ್ರೆಸ್ ಬಲವಾಗಿರುವ ಬೂತ್ಗಳನ್ನೇ ಟಾರ್ಗೆಟ್ ಮಾಡಿ ಮತಗಳ್ಳತನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಸಿಐಡಿ 18 ತಿಂಗಳಲ್ಲಿ 18 ಪತ್ರ ಬರೆದಿದೆ. ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಅವರು ಉತ್ತರ ನೀಡುತ್ತಿಲ್ಲ. CEC of Karnataka ದೆಹಲಿಗೆ ಪತ್ರ ಬರೆದಿದೆ. ಉತ್ತರ ಬಂದಿಲ್ಲ. ಇದು ಬಲವಾದ ಸಾಕ್ಷ್ಯ. ಜ್ಞಾನೇಶ್ ಕುಮಾರ್ ಯಾರನ್ನೋ ರಕ್ಷಣೆ ಮಾಡುತ್ತಿದ್ದಾರೆ. ಚುನಾವಣಾ ಆಯೋಗಕ್ಕೆ ಉತ್ತರ ಗೊತ್ತಿದೆ. ಯಾರವರು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಇದು ಹೈಡ್ರೋಜನ್ ಬಾಂಬಲ್ಲ, ಹೈಡ್ರೋಜನ್ ಬಾಂಬ್ ಬರಬೇಕಷ್ಟೇ. ಈ ದೇಶದ ಯುವಕರಿಗೆ ಚುನಾವಣೆಗಳಲ್ಲಿ ಹೇಗೆ ಅಕ್ರಮ ನಡೆಯುತ್ತಿದೆ ಎಂಬುದನ್ನು ತಿಳಿಸುವ ನಿಟ್ಟಿನಲ್ಲಿ ಇದು ಮತ್ತೊಂದು ಮೈಲಿಗಲ್ಲು ಎಂದು ಹೇಳಿದ್ದಾರೆ.
ಭಾರತದ ಮುಖ್ಯ ಚುನಾವಣಾ ಆಯುಕ್ತರು ಭಾರತೀಯ ಪ್ರಜಾಪ್ರಭುತ್ವವನ್ನು ನಾಶ ಮಾಡಿದವರನ್ನು ರಕ್ಷಿಸುತ್ತಿದ್ದಾರೆ. ಈ ವೇದಿಕೆಯಲ್ಲಿ ನಾನು ಶೇ.100 ರಷ್ಟು ಸತ್ಯವಾದ ವಿಚಾರವನ್ನೇ ಹೇಳುತ್ತಿದ್ದೇನೆ. ನನ್ನ ದೇಶವನ್ನು ಪ್ರೀತಿಸುವ ವ್ಯಕ್ತಿ ನಾನು. ನನ್ನ ಸಂವಿಧಾನವನ್ನು ಪ್ರೀತಿಸುತ್ತೇನೆ. ನಾನು ಪ್ರಜಾಪ್ರಭುತ್ವವನ್ನು ಪ್ರೀತಿಸುತ್ತೇನೆ. ಅದನ್ನು ರಕ್ಷಿಸುತ್ತಿದ್ದೇನೆ. ಶೇ.100 ರಷ್ಟು ಸತ್ಯವಲ್ಲದ ಯಾವ ವಿಚಾರವನ್ನೂ ನಾನಿಲ್ಲಿ ನಿಮಗೆ ಹೇಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಳಂದ ಶಾಸಕ ಬಿ.ಆರ್.ಪಾಟೀಲ್ ನೇತೃತ್ವದಲ್ಲಿ ಮತದಾರರನ್ನ ಕರೆಸಿ ಸುದ್ದಿಗೋಷ್ಠಿ ಮುಂದೆ ನಿಲ್ಲಿಸಿ ರಾಹುಲ್ ಗಾಂಧಿ ಸಾಕ್ಷಿ ಹೇಳಿಸಿದ್ದಾರೆ. ಗೋದಾಬಾಯಿ, ಸೂರ್ಯಕಾಂತ್, ನಾಗರಾಜ್ ಎಂಬವರು ಹಾಜರಿದ್ದರು. ಈ ವೇಳೆ ಮಾತನಾಡಿದ ಸೂರ್ಯಕಾಂತ್, ನಾನು ಡಿಲೀಟ್ ಮಾಡಿಸಿಲ್ಲ. ಈ ಬಗ್ಗೆ ದೂರು ಕೊಟ್ಟಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.